ಅಮರಾವತಿ (ಆಂಧ್ರಪ್ರದೇಶ): ಮುಂಬರುವ ಲೋಕಸಭೆ ಚುನಾವಣೆಗೆ ಟಿಡಿಪಿ ತನ್ನ ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದೆ. ಇದರಲ್ಲಿ ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಗೊಂಡ ವೈಎಸ್ಆರ್ ಕಾಂಗ್ರೆಸ್ ಮಾಜಿ ಸಂಸದರೂ ಸೇರಿದ್ದಾರೆ.
ಆಡಳಿತಾರೂಢ ವೈಎಸ್ಆರ್ಸಿಪಿಯಿಂದ ಹೊರಬಂದ ಎಂ.ಶ್ರೀನಿವಾಸುಲು ರೆಡ್ಡಿ ಅವರನ್ನು ಟಿಡಿಪಿ ಒಂಗೋಲ್ನಿಂದ ಕಣಕ್ಕಿಳಿಸಿದೆ. 2019ರಲ್ಲಿ ಇವರು ವೈಎಸ್ಆರ್ಸಿಪಿ ಟಿಕೆಟ್ನಲ್ಲಿ ಅದೇ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.
ವಿಜಯನಗರದಿಂದ ಕೆ. ಅಪ್ಪಲನಾಯ್ಡು, ಅನಂತಪುರದಿಂದ ಎ. ಲಕ್ಷ್ಮೀನಾರಾಯಣ ಮತ್ತು ಕಡಪದಿಂದ ಸಿ. ಭೂಪೇಶ್ ರೆಡ್ಡಿ ಅವರನ್ನು ಕಣಕ್ಕಿಳಿಸಿದೆ.
ಈ ನಾಲ್ಕು ಹೆಸರುಗಳ ಘೋಷಣೆಯೊಂದಿಗೆ, ಟಿಡಿಪಿ 17 ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳ ಘೋಷಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಸಾರ್ವಜನಿಕ ಅಭಿಪ್ರಾಯ ಪಡೆದು ಟಿಡಿಪಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿತ್ತು .
17 ಲೋಕಸಭಾ ಸ್ಥಾನಗಳಲ್ಲದೆ, ರಾಜ್ಯದಲ್ಲಿ ಮೇ 13 ರಂದು ಏಕಕಾಲದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿಗೆ 144 ಕ್ಷೇತ್ರಗಳನ್ನು ಹಂಚಿಕೆ ಮಾಡಲಾಗಿದೆ. ಒಪ್ಪಂದದ ಪ್ರಕಾರ, ನಟ ಪವನ್ ಕಲ್ಯಾಣ್ ಅವರ ಜನಸೇನಾ ಎರಡು ಲೋಕಸಭಾ ಕ್ಷೇತ್ರ ಮತ್ತು 21 ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲಿದೆ .
ಆಂಧ್ರಪ್ರದೇಶವು ಒಟ್ಟು 25 ಲೋಕಸಭೆ ಮತ್ತು 175 ವಿಧಾನಸಭಾ ಸ್ಥಾನಗಳನ್ನು ಹೊಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.