
ಶ್ರೀನಗರ: ಜಮ್ಮು–ಕಾಶ್ಮೀರದ ಆಡಳಿತ ವ್ಯವಸ್ಥೆ ಮತ್ತು ಪೊಲೀಸರು ಲೋಕಸಭಾ ಚುನಾವಣೆಯ ಸಮಯದಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದು, ಅದರ ಫಲವಾಗಿ ‘ಶತ್ರು’ ರಾಷ್ಟ್ರವಾದ ಪಾಕಿಸ್ತಾನದ ಕಣ್ಣು, ಕಿವಿಗಳಂತೆ ಈ ಹಿಂದೆ ಕೆಲಸ ಮಾಡಿದವರು ಕೂಡ ಈ ಬಾರಿ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸ್ ಮಹಾನಿರ್ದೇಶಕ ರಶ್ಮಿ ರಂಜನ್ ಸ್ವೈನ್ ಹೇಳಿದರು.
‘ಪ್ರಾಂತ್ಯದ ಜನರಲ್ಲಿ ಸ್ವಾತಂತ್ರ್ಯದ ಭಾವನೆ ಮೂಡಿದ್ದು, ಭಯ ಕಡಿಮೆಯಾಗಿದೆ. ಅದರಿಂದ ದಾಖಲೆ ಮತದಾನವಾಗಿದ್ದು, ಇಲ್ಲಿನ ರಾಜಕೀಯ ಸ್ವರೂಪದಲ್ಲಿ ಬದಲಾವಣೆ ಆಗಲಿದೆ’ ಎಂದು ಪಿಟಿಐಗೆ ತಿಳಿಸಿದರು.
‘ಹಿಂದೆ ಪಾಕಿಸ್ತಾನದ ನಕಲಿಗಳು, ಏಜೆಂಟರು ಮತ್ತು ಉಗ್ರರು ಚುನಾವಣಾ ಪ್ರಕ್ರಿಯೆಗೆ ನಾನಾ ರೀತಿ ಅಡ್ಡಿಪಡಿಸುತ್ತಿದ್ದರು. ಈ ಬಾರಿ ಪೊಲೀಸರು ಮತ್ತು ಆಡಳಿತ ಯಂತ್ರದ ಬಿಗಿ ಕ್ರಮಗಳಿಂದ ಚುನಾವಣೆ ಸುಸೂತ್ರವಾಗಿ ನಡೆಯಿತು’ ಎಂದರು.
‘ಜತೆಗೆ ನಿಷೇಧಿತ ಜಮಾತ್–ಎ–ಇಸ್ಲಾಮಿ ಸಂಘಟನೆಯು ಈ ಹಿಂದೆ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಜನರ ಮಾಹಿತಿ ಸಂಗ್ರಹಿಸಿ, ನಂತರ ಅವರನ್ನು ಗುರಿ ಮಾಡುತ್ತಿತ್ತು. ಈ ಬಾರಿ ಅದರ ಸದಸ್ಯರೇ ಬಹಿರಂಗವಾಗಿ ಮತದಾನದಲ್ಲಿ ಪಾಲ್ಗೊಂಡಿದ್ದರು. ಇದು ಪ್ರಾಂತ್ಯದ ಜನರ ಮನೋಭಾವದಲ್ಲಿ ಬಹುದೊಡ್ಡ ಬದಲಾವಣೆ ಆಗಿರುವುದನ್ನು ತೋರಿಸುತ್ತದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.