ನವದೆಹಲಿ: ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸುತ್ತಿದ್ದು, ಮಿತ್ರಪಕ್ಷ ಎನ್ಸಿಪಿ ಸಚಿವ ಸ್ಥಾನದ ವಿಷಯದಲ್ಲಿ ಅಸಮಾಧಾನ ಹೊರಹಾಕಿದೆ.
‘ನಮ್ಮ ಪಕ್ಷದ ಪ್ರಫುಲ್ ಪಟೇಲ್ ಅವರು ಕ್ಯಾಬಿನೆಟ್ ದರ್ಜೆ ಸಚಿವರಾಗಿ ಕೆಲಸ ಮಾಡಿದ್ದಾರೆ. ಈಗ ಸ್ವತಂತ್ರ ಖಾತೆ ರಾಜ್ಯ ಸಚಿವ ಸ್ಥಾನ ನೀಡುವುದಾಗಿ ಹೇಳುತ್ತಿದ್ದಾರೆ. ಇದುಸೂಕ್ತವಲ್ಲ. ಹಾಗಾಗಿ, ಕೆಲ ದಿನಗಳ ಕಾಲ ನಾವು ಕಾಯಲು ಸಿದ್ಧವಿದ್ದೇವೆ. ನಮಗೆ ಸಂಪುಟ ದರ್ಜೆಯೇ ಬೇಕು’ ಎಂದು ಎನ್ಸಿಪಿ ಅಧ್ಯಕ್ಷ ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ.
ಇದೇವೇಳೆ, ಇಂದಿನ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಹೇಳಿದ ಅವರು, ಸದ್ಯ ನಾವು ಒಂದು ಲೋಕಸಭಾ ಮತ್ತು ಒಂದು ರಾಜ್ಯಸಭಾ ಸ್ಥಾನ ಹೊಂದಿದ್ದೇವೆ. ಮುಂದಿನ 2–3 ತಿಂಗಳಲ್ಲಿ ರಾಜ್ಯಸಭೆಯಲ್ಲಿ ನಮ್ಮ ಸಂಖ್ಯೆ 3ಕ್ಕೆ ಏರಲಿದೆ. ಒಟ್ಟಾರೆ ನಮ್ಮ ಪಕ್ಷದ ಸಂಸತ್ ಸದಸ್ಯರ ಸಂಖ್ಯೆ 4ಕ್ಕೆ ಏರಲಿದೆ. ಹಾಗಾಗಿ, ನಮಗೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿರುವುದಾಗಿ ಹೇಳಿದ್ದಾರೆ.
'ಮೈತ್ರಿ ಮೂಲಕ ಸರ್ಕಾರ ರಚಿಸಿದಾಗ ಕೆಲವು ಮಾನದಂಡಗಳನ್ನು ನಿರ್ಧರಿಸಬೇಕು. ಏಕೆಂದರೆ, ಹಲವು ಪಕ್ಷಗಳು ಒಟ್ಟಿಗೆ ಸೇರಿರುತ್ತವೆ. ಒಂದು ಪಕ್ಷದ ಕಾರಣಕ್ಕೆ ಮಾನದಂಡವನ್ನು ತಿರುಚಬಾರದು’ಎಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೇಂದ್ರ ಸಂಪುಟದಲ್ಲಿ ಎನ್ಸಿಪಿ ಪಕ್ಷದಿಂದ ಪ್ರಫುಲ್ ಪಟೇಲ್ ಅವರಿಗೆ ಸ್ವತಂತ್ರ ಖಾತೆ ರಾಜ್ಯ ಸಚಿವ ಸ್ಥಾನದ ಆಫರ್ ನೀಡಲಾಗಿದ್ದು, ಪ್ರಫುಲ್ ಪಟೇಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.
ಈ ನಡುವೆ ಸಂಪುಟ ವಿಸ್ತರಣೆ ಸಮಯದಲ್ಲಿ ಎನ್ಸಿಪಿಯನ್ನು ಗಮನದಲ್ಲಿಟ್ಟುಕೊಳ್ಳಲಾಗುವುದು ಎಂದು ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.