ADVERTISEMENT

ಸಂಸದರ ನಿಧಿ: ಸಮುದಾಯ ಭವನಗಳಿಗೆ ಸಿಂಹಪಾಲು

ಹರಪನಹಳ್ಳಿ ತಾಲ್ಲೂಕಿಗೆ ಹೆಚ್ಚು, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಕಡಿಮೆ ಅನುದಾನ

ಚಂದ್ರಹಾಸ ಹಿರೇಮಳಲಿ
Published 15 ಮಾರ್ಚ್ 2014, 5:22 IST
Last Updated 15 ಮಾರ್ಚ್ 2014, 5:22 IST

ದಾವಣಗೆರೆ: ಸಂಸತ್‌ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಯೋಜನೆ ಅಡಿ ಐದು ವರ್ಷಗಳ ಅವಧಿಯಲ್ಲಿ ದೊರೆತ ₨ 20.9 ಕೋಟಿ ಅನುದಾನದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಹಿಂದುಳಿದ ಹರಪನಹಳ್ಳಿ ಕ್ಷೇತ್ರಕ್ಕೆ ಹೆಚ್ಚು ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಅತ್ಯಂತ ಕಡಿಮೆ ಹಣ ಬಳಸಿದ್ದಾರೆ.

ಎರಡು ಅವಧಿ ಸಂಸತ್‌ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಅವರಿಗೆ ಕ್ಷೇತ್ರದ ಅಭಿವೃದ್ಧಿಗಾಗಿ 2009–2014ರ ಅವಧಿಯಲ್ಲಿ ಸರ್ಕಾರ₨ 20.9 ಕೋಟಿ ಹಣ ಬಿಡುಗಡೆ ಮಾಡಿತ್ತು.ಜಿಲ್ಲೆಯಲ್ಲಿ ಅತ್ಯಂತ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿಇರುವ ಹರಪನಹಳ್ಳಿಗೆ ₨ 4.54 ಕೋಟಿ ನೀಡಿದರೆ, ಜಿಲ್ಲೆಯ ಮತ್ತೊಂದು ಹಿಂದುಳಿದ ತಾಲ್ಲೂಕು ಜಗಳೂರಿಗೆ ₨ 2.68 ಕೋಟಿ ನೀಡಿದ್ದಾರೆ.

ಚನ್ನಗಿರಿ ತಾಲ್ಲೂಕಿಗೆ ₨ 3.50 ಕೋಟಿ, ಹರಿಹರ ತಾಲ್ಲೂಕಿಗೆ ₨ 2.87 ಕೋಟಿ, ಹೊನ್ನಾಳಿ ತಾಲ್ಲೂಕಿಗೆ
₨ 2.59 ಕೋಟಿ, ಮಾಯಕೊಂಡ ಕ್ಷೇತ್ರಕ್ಕೆ ₨ 2.33 ಕೋಟಿ ನೀಡಿದ್ದಾರೆ. ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 8 ವಿಧಾನಸಭಾ ಕ್ಷೇತ್ರಗಳಿಗೆ ಮಾಡಿದ ಅನುದಾನ ಹಂಚಿಕೆಯಲ್ಲಿ ಕೊನೆಯ ಸ್ಥಾನ ದಾವಣಗೆರೆ ಉತ್ತರ ಹಾಗೂ ದಕ್ಷಿಣ ಕ್ಷೇತ್ರಗಳಿಗೆ ದೊರೆತಿದೆ. ಉತ್ತರಕ್ಕೆ ₨ 1.68 ಕೋಟಿ ನೀಡಿದರೆ, ದಕ್ಷಿಣಕ್ಕೆ ಕೇವಲ ₨ 1.02 ಕೋಟಿ ನೀಡಲಾಗಿದೆ.

ಸಮುದಾಯ ಭವನ, ಸಿಮೆಂಟ್‌ ರಸ್ತೆಗೆ ಆದ್ಯತೆ
ಸಂಸದ ಸಿದ್ದೇಶ್ವರ ಅವರು ಹಣ ವಿನಿಯೋಗದ ಮಾರ್ಗದರ್ಶಿ ಸೂತ್ರದ ಅನ್ವಯ ಹಲವು ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲು ಅವಕಾಶವಿದ್ದರೂ, ಕ್ಷೇತ್ರದ ಹಳ್ಳಿಗಳಲ್ಲಿ ಸಿಮೆಂಟ್‌ ರಸ್ತೆ ಹಾಗೂ ಸಮುದಾಯ ಭವನಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.

ಸಿಮೆಂಟ್‌ ರಸ್ತೆ ಅಭಿವೃದ್ಧಿಗಾಗಿಯೇ ₨ 6.42 ಕೋಟಿ, ಸಮುದಾಯ ಭವನಗಳಿಗೆ 6.15 ಕೋಟಿ, ಬಸ್‌ತಂಗುದಾಣಗಳಿಗೆ ₨ 2.02 ಕೋಟಿ ಹಂಚಿಕೆ ಮಾಡಿದ್ದಾರೆ.

ಉಳಿದಂತೆ ರಂಗಮಂದಿರಗಳ ನಿರ್ಮಾಣಕ್ಕೆ ₨ 78 ಲಕ್ಷ, ವ್ಯಾಯಾಮ ಶಾಲೆಗಳಿಗೆ ₨ 57.50 ಲಕ್ಷ,  ಭಜನಾ ಮಂದಿರಗಳಿಗೆ ₨ 42 ಲಕ್ಷ, ಅಂಗನವಾಡಿ ಕಟ್ಟಡಗಳಿಗೆ ₨ 35 ಲಕ್ಷ ಅನುದಾನ ನೀಡಲಾಗಿದೆ. ಗ್ರಂಥಾಲಯ, ಶಾಲಾ ಕೊಠಡಿಗಳಿಗೂ ಸ್ವಲ್ಪ ಪ್ರಮಾಣದ ಅನುದಾನ ವಿನಿಯೋಗಿಸಲಾಗಿದೆ.

ಅನುದಾನ ಬಳಕೆ–ಉಳಿಕೆ
2009–10ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಕ್ಷೇತ್ರಕ್ಕೆ ₨ 2 ಕೋಟಿ ಬಿಡುಗಡೆಮಾಡಿದ್ದು, ಅದರಲ್ಲಿ
₨ 1.89 ಕೋಟಿ ಖರ್ಚು ಮಾಡಲಾಗಿದೆ. 2010–11ನೇ ಸಾಲಿನಲ್ಲೂ ₨  2 ಕೋಟಿ ಬಿಡುಗಡೆಯಾಗಿದ್ದು ಹಿಂದಿನ ವರ್ಷದ ಅನುದಾನವೂ ಸೇರಿದಂತೆ ಆ ವರ್ಷ ₨ 2.44 ಕೋಟಿ ಖರ್ಚು ಮಾಡಲಾಗಿದೆ. 2011–12 ಹಾಗೂ 12–13ನೇ ಸಾಲಿನಲ್ಲಿ ತಲಾ ₨ 5 ಕೋಟಿ ಬಿಡುಗಡೆಯಾಗಿದ್ದು, ಅಷ್ಟೂ ಹಣವನ್ನೂ ಖರ್ಚು ಮಾಡಲಾಗಿದೆ.

2013–14ನೇ ಸಾಲಿಗೂ ₨ 5 ಕೋಟಿ ಬಿಡುಗಡೆಯಾಗಿದ್ದು, ಎಲ್ಲ ಹಣ ಬಳಸಲೂ ಶಿಫಾರಸು ಮಾಡಿದ್ದಾರೆ.
ಕೊನೆಯ ವರ್ಷವೂ ಸಿಮೆಂಟ್‌ ರಸ್ತೆ ಹಾಗೂ ಸಮುದಾಯ ಭವನಗಳಿಗೆ ಸಿಂಹಪಾಲು ವ್ಯಯಿಸಲಾಗಿದೆ. 2009–10,
11–12, 12–13 ಸಾಲಿನಲ್ಲೂ ಸಮುದಾಯ ಭವನ ಹಾಗೂ ಸಿಮೆಂಟ್‌ ರಸ್ತೆಗಳ ನಿರ್ಮಾಣಕ್ಕೆ
ಹಣ ವಿನಿಯೋಗ ಮಾಡಲಾಗಿದೆ.

2010–11ನೇ ಸಾಲಿನಲ್ಲಿ ಮಾತ್ರ ಅನುದಾನದಲ್ಲಿ  ಶಾಲಾ ಕೊಠಡಿಗಳ ನಿರ್ಮಾಣಕ್ಕೆ ₨ 90 ಲಕ್ಷ ನೀಡಲಾಗಿದೆ.

ಸಂಸದರ ನಿಧಿ ವಿಧಾನಸಭಾವಾರು ಹಂಚಿಕೆ
ಕ್ಷೇತ್ರ                      ಅನುದಾನ
ಹರಪನಹಳ್ಳಿ              ₨ 4.54 ಕೋಟಿ 
ಜಗಳೂರು                ₨ 2.68 ಕೋಟಿ
ಚನ್ನಗಿರಿ                   ₨ 3.50 ಕೋಟಿ
ಹರಿಹರ                   ₨ 2.87 ಕೋಟಿ
ಹೊನ್ನಾಳಿ                 ₨ 2.59 ಕೋಟಿ
ಮಾಯಕೊಂಡ          ₨ 2.33 ಕೋಟಿ 
ದಾವಣಗೆರೆ ಉತ್ತರ     ₨ 1.68 ಕೋಟಿ 
ದಾವಣಗೆರೆ ದಕ್ಷಿಣ       ₨ 1.02 ಕೋಟಿ

683 ಕಾಮಗಾರಿಗೆ ಶಿಫಾರಸು
2009ರಿಂದ 2014ರ ಅವಧಿಯಲ್ಲಿ ದೊರೆತ ₨ 20.9 ಕೋಟಿ ಅನುದಾನವನ್ನು ಸಿದ್ದೇಶ್ವರ ಅವರು ಸಂಪೂರ್ಣ ಬಳಕೆ ಮಾಡಿಕೊಂಡಿದ್ದಾರೆ. ಒಟ್ಟು 683 ಕಾಮಗಾರಿಗಳಿಗೆ ಶಿಫಾರಸು ಮಾಡಲಾಗಿದ್ದು, ಅವುಗಳಲ್ಲಿ 461 ಕಾಮಗಾರಿ ಪೂರ್ಣಗೊಂಡಿವೆ. 163 ಕಾಮಗಾರಿ ಪ್ರಗತಿಯಲ್ಲಿವೆ. ಉಳಿದ 59 ಕಾಮಗಾರಿ ಆರಂಭ ಆಗಬೇಕಿದೆ.

ಕನ್ನಡ ಭವನಕ್ಕೆ ₨ 10 ಲಕ್ಷ
ಹಿಂದಿನ ಚುನಾವಣೆಯ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಜಿ.ಎಂ. ಸಿದ್ದೇಶ್ವರ ಅವರು  ಜಿಲ್ಲಾ ಕನ್ನಡ ಭವನ ನಿರ್ಮಾಣಕ್ಕೆ ₨ 10 ಲಕ್ಷ ನೀಡಿದ್ದಾರೆ. ಅಲ್ಲದೇ, ಚನ್ನಗಿರಿ ತಾಲ್ಲೂಕು ಕತ್ತಲಗೆರೆ, ಹರಪನಹಳ್ಳಿ ತಾಲ್ಲೂಕು
ಅರಸಿಕೆರೆ, ಜಗಳೂರು ತಾಲ್ಲೂಕಿನ ಗುರುಸಿದ್ದಾಪುರ– ಮಡ್ರಳ್ಳಿ ಸಮುದಾಯ ಭವನಗಳಿಗೆ ತಲಾ ₨ 10 ಲಕ್ಷ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.