ADVERTISEMENT

ಹಾಸನದಲ್ಲಿ ಹೆಣ್ಮಕ್ಕಳ ಮಾನ ಹರಾಜು: ಡಿ.ಕೆ. ಸುರೇಶ್

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2024, 20:07 IST
Last Updated 26 ಏಪ್ರಿಲ್ 2024, 20:07 IST
ಕನಕಪುರ ತಾಲ್ಲೂಕಿನ ದೊಡ್ಡ ಆಲಹಳ್ಳಿಯಲ್ಲಿ ಶುಕ್ರವಾರ ಮತ ಚಲಾಯಿಸಿದ ಸಹೋದರರಾದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬೆರಳಿಗೆ ಹಚ್ಚಿದ ಶಾಯಿಯನ್ನು ಪ್ರದರ್ಶಿಸಿದರು
ಕನಕಪುರ ತಾಲ್ಲೂಕಿನ ದೊಡ್ಡ ಆಲಹಳ್ಳಿಯಲ್ಲಿ ಶುಕ್ರವಾರ ಮತ ಚಲಾಯಿಸಿದ ಸಹೋದರರಾದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬೆರಳಿಗೆ ಹಚ್ಚಿದ ಶಾಯಿಯನ್ನು ಪ್ರದರ್ಶಿಸಿದರು   

ಕನಕಪುರ (ರಾಮನಗರ): ‘ನಾವು ಗಿಫ್ಟ್ ಕಾರ್ಡ್ ಹಂಚಿದ್ದೇವೆ ಎನ್ನುವ ಕುಮಾರಸ್ವಾಮಿ ಅವರು ಹಾಸನದಲ್ಲಿ ಹರಾಜಾಗಿರುವ ಹೆಣ್ಣು ಮಕ್ಕಳ ಮಾನ, ಮರ್ಯಾದೆ ಬಗ್ಗೆ ಮೊದಲು ಮಾತನಾಡಲಿ’ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಸವಾಲು ಹಾಕಿದ್ದಾರೆ.

ಮತದಾನದ ದಿನದಂದು ಡಿ.ಕೆ ಸಹೋದರರು ಜಿಲ್ಲೆಯಲ್ಲಿ ಗಿಫ್ಟ್ ಕಾರ್ಡ್ ಹಂಚುತ್ತಿದ್ದಾರೆಂಬ ಎಚ್‌.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಶುಕ್ರವಾರ ದೊಡ್ಡಆಲಹಳ್ಳಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

‘ಹಾಸನ ಜಿಲ್ಲೆಯಲ್ಲಿ ನಡೆದಿರುವ ಘಟನೆ ರಾಜ್ಯ ಹಾಗೂ ಈ ಸಮಾಜದ ಮರ್ಯಾದೆಯನ್ನು ಹರಾಜು ಹಾಕಿದೆ. ಪಾಪದ ಹೆಣ್ಣು ಮಕ್ಕಳ ಮಾನ, ಮರ್ಯಾದೆ ಕಳೆಯುವ ಕೆಲಸ ಮಾಡಿರುವ ಕುಮಾರಸ್ವಾಮಿ ಅವರ ಕುಟುಂಬಕ್ಕೆ ನಾಚಿಕೆಯಾಗಬೇಕು’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ಕುಮಾರಸ್ವಾಮಿ ಅವರ ಕುಟುಂಬಕ್ಕೆ ಹೆಣ್ಣು ಮಕ್ಕಳ ಮೇಲೆ ನಿಜವಾಗಿಯೂ ಗೌರವ ಇದ್ದರೆ ನಿನ್ನೆಯೇ ಚುನಾವಣಾ ಕಣದಿಂದ ಹಿಂದೆ ಸರಿಯಬೇಕಿತ್ತು. ಹಾಸನ ಜಿಲ್ಲೆಯಲ್ಲಿ ಏನಾಗುತ್ತಿದೆ? ಅದಕ್ಕೆಲ್ಲ ಉತ್ತರ ಕೊಡುವವರು ಯಾರು? ಬೇರೆಯವರ ಮೇಲೆ ಆರೋಪ ಮಾಡುವುದು. ತಮ್ಮ ಮೇಲೆ ಆರೋಪ ಬಂದಾಗ ಮೌನವಾಗಿರುವುದೊಂದೇ ಎಲ್ಲದಕ್ಕೂ ಪರಿಹಾರವಲ್ಲ. ತಮ್ಮ ನಡೆ, ನುಡಿಯನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಎಚ್‌ಡಿಕೆ ಸತ್ಯಹರಿಶ್ಚಂದ್ರನ ಮೊಮ್ಮಗ ಅಲ್ಲವೇ?’

ಕನಕಪುರ (ರಾಮನಗರ): ‘ಎಚ್‌.ಡಿ. ಕುಮಾರಸ್ವಾಮಿ ಸತ್ಯಹರಿಶ್ಚಂದ್ರನ ಮೊಮ್ಮಗ ಅಲ್ಲವೇ? ಖಾಲಿ ಮಾತಿನ ಮೂಲಕ ಹಿಟ್ ಅಂಡ್ ರನ್ ಮಾಡುವುದನ್ನು ಬಿಟ್ಟು ಗಿಫ್ಟ್ ಕಾರ್ಡ್ ಬಗ್ಗೆ ಸಾಕ್ಷಿ ಇದ್ದರೆ ಚುನಾವಣಾ ಆಯೋಗಕ್ಕೆ ದೂರು ಕೊಡಲಿ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು. 

ಮತದಾನದ ದಿನದಂದು ಡಿ.ಕೆ ಸಹೋದರರು ಜಿಲ್ಲೆಯಲ್ಲಿ ಗಿಫ್ಟ್ ಕಾರ್ಡ್ ಹಂಚುತ್ತಿದ್ದಾರೆಂಬ ಎಚ್‌.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಶುಕ್ರವಾರ ದೊಡ್ಡಆಲಹಳ್ಳಿ ಸುದ್ದಿಗಾರರಿಗೆ ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.