ಬೆಳಗಾವಿ: ‘ಲಕ್ಷ್ಮಣ ಸವದಿ ತಮ್ಮ ನಿರ್ಧಾರ ಇನ್ನೊಮ್ಮೆ ಪರಿಶೀಲನೆ ಮಾಡಲಿ. ಆತುರಕ್ಕೆ ಬಿದ್ದು ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು. ಪಕ್ಷ ಬಿಡಬಾರದು’ ಎಂದು ಶಾಸಕ ರಮೇಶ ಜಾರಕಿಹೊಳಿ ಸಲಹೆ ನೀಡಿದರು.
ಗೋಕಾಕ ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ನಾನು– ಲಕ್ಷ್ಮಣ ನಿಜವಾಗಿ ಒಳ್ಳೆಯ ಗೆಳೆಯರು. ಯಾವುದೋ ಕೆಟ್ಟ ಘಳಿಗೆಯಲ್ಲಿ ಬೇರೆಬೇರೆ ಆಗಿದ್ದೇವೆ. ನಾನು ಮೊದಲ ಕಾಂಗ್ರೆಸ್ನಲ್ಲಿದ್ದೆ. ಅವನು ಬಿಜೆಪಿಯಲ್ಲಿದ್ದ. ಈಗ ಇಬ್ಬರೂ ಒಂದೇ ಕಡೆ ಇದ್ದೇವೆ. ಕಾಂಗ್ರೆಸ್ ಬಗ್ಗೆ ನನಗೆ ಗೊತ್ತು. ಅದು ಮೋಸದ ಪಕ್ಷ. ಬಿಜೆಪಿ ಬಿಟ್ಟು ಅಂಥ ಪಕ್ಷ ಸೇರಬಾರದು’ ಎಂದರು.
‘ನಾವಿಬ್ಬರೂ ಸೇರಿ ಈ ಬಾರಿ ಜಿಲ್ಲೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಿಸೋಣ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಶ್ರಮಿಸೋಣ. ಇಬ್ಬರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇದ್ದರೂ ಕುಳಿತು ಮಾತಾಡೋಣ. ಆದರೆ, ಪಕ್ಷ ಬಿಟ್ಟು ಹೋಗಬೇಡ’ ಎಂದೂ ರಮೇಶ ಹೇಳಿದರು.
‘ಟಿಕೆಟ್ ವಿಚಾರದಲ್ಲಿ ಮಹೇಶ ಕುಮಠಳ್ಳಿ ಪರವಾಗಿ ಬ್ಯಾಟಿಂಗ್ ಮಾಡುವುದು ನನ್ನ ಧರ್ಮ. ನಾನು ಮಾಡಿದ್ದೇನೆ. ಆದರೆ, ಲಕ್ಷ್ಮಣ ಸವದಿಯ ಸ್ಥಾನ ಕಸಿದುಕೊಂಡಿಲ್ಲ. ಹಿಂದೆ ಕಾಂಗ್ರೆಸ್ನಲ್ಲಿದ್ದಾಗ ಆ ಪಕ್ಷದ ಅಭ್ಯರ್ಥಿ ಗೆಲ್ಲಿಸುವುದು ನನ್ನ ಗುರಿಯಾಗಿತ್ತು. ಗೆಲ್ಲಿಸಿದ್ದೆ. ಈಗ ನೀನು ವಿಧಾನ ಪರಿಷತ್ ಸದಸ್ಯ. ಇನ್ನೂ ಐದು ವರ್ಷ ಅಧಿಕಾರ ಅವಧಿ ಇದೆ. ವಿಚಾರ ಮಾಡು’ ಎಂದೂ ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.