ADVERTISEMENT

ಬಿಜೆಪಿ ಮನೆಗೆ ಹತ್ತಿದ ಬೆಂಕಿ ಸದ್ಯಕ್ಕೆ ನಂದುವುದಿಲ್ಲ: ಸಚಿವ ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2024, 12:49 IST
Last Updated 26 ಮಾರ್ಚ್ 2024, 12:49 IST
<div class="paragraphs"><p>ಸಚಿವ ಸತೀಶ ಜಾರಕಿಹೊಳಿ</p></div>

ಸಚಿವ ಸತೀಶ ಜಾರಕಿಹೊಳಿ

   

ಬೆಳಗಾವಿ: ‘ಎದುರಾಳಿಗಳು ತಮ್ಮ ಮನೆಗೆ ತಾವೇ ಬೆಂಕಿ ಹಚ್ಚಿಕೊಂಡಿದ್ದಾರೆ. ಅದನ್ನು ಆರಿಸುವ ಹೊತ್ತಿಗೆ ಚುನಾವಣೆಯೇ ಮುಗಿದು ಹೋಗುತ್ತದೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸೂಚ್ಯವಾಗಿ ಹೇಳಿದರು.

ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅಭ್ಯರ್ಥಿ ಆಗುವುದು ಬೇಡವೆಂದು ಬಿಜೆಪಿಯರೇ ಕೂಗಾಟ– ಚೀರಾಟ ಶುರು ಮಾಡಿದ್ದಾರೆ. ‘ಗೋ ಬ್ಯಾಕ್ ಶೆಟ್ಟರ್’ ಅಭಿಯಾನ ಆರಂಭಿಸಿದ್ದಾರೆ. ಬಿಜೆಪಿಯಲ್ಲಿ ಬೆಂಕಿಯ ವಾತಾವರಣ ನಿರ್ಮಾಣವಾಗಿದೆ’ ಎಂದರು.

ADVERTISEMENT

‘ಬೆಳಗಾವಿ ಮತ್ತು ಚಿಕ್ಕೋಡಿ ಕ್ಷೇತ್ರಗಳಲ್ಲಿ ನಾವು ಯುವಕರನ್ನು ಕಣಕ್ಕಿಳಿಸಿದ್ದೇವೆ. ಅವರು ಪಕ್ಷಕ್ಕೆ ಆಸ್ತಿಯಾಗುತ್ತಾರೆ. ಜನರ ಅಗತ್ಯಗಳಿಗೆ ಸ್ಪಂದಿಸುತ್ತಾರೆ. ಅನುಭವ ಪಡೆದಂತೆ ಮೃಣಾಲ್ ಮತ್ತು ಪ್ರಿಯಾಂಕಾ ಇಬ್ಬರೂ ತಮ್ಮದೇಯಾದ ಛಾಪು ಮೂಡಿಸುತ್ತಾರೆ. ಅವರಿಬ್ಬರೂ ಚಿಕ್ಕವರು ಮತ್ತು ಹೆಚ್ಚಿನ ಅನುಭವ ಹೊಂದಿಲ್ಲ ಎಂಬ ಭಾವನೆ ಮೂಡಿಸಲು ಬಿಜೆಪಿಯವರು ಯತ್ನಿಸುತ್ತಿದ್ದಾರೆ. ಇಬ್ಬರೂ ಕಲಿತಿದ್ದಾರೆ ಮತ್ತು ಏನು ಮಾಡಬೇಕೆಂದು ತಿಳಿದಿದ್ದಾರೆ’ ಎಂದು ಹೇಳಿದರು.

‘ಮೃಣಾಲ್ ಹಾಗೂ ಪ್ರಿಯಾಂಕಾ ಗೆಲುವಿಗೆ ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದೆ’ ಎಂದೂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಲಕ್ಷ್ಮಣ ಸವದಿ ಅವರನ್ನು ಸೈಡ್‌ಲೈನ್‌ ಮಾಡಲಾಗುತ್ತಿದೆಯೇ? ಕಾಂಗ್ರೆಸ್‌ ಬ್ಯಾನರ್‌ಗಳಲ್ಲಿ ಅವರ ಚಿತ್ರವೂ ಕಾಣುತ್ತಿಲ್ಲವಲ್ಲ’ ಎಂಬ ಪ್ರಶ್ನೆಗೆ, ‘ನಾವು ಯಾರನ್ನೂ ಬದಿಗಿಟ್ಟಿಲ್ಲ. ಹಾಗಾಗಿ ಎಲ್ಲರೂ ಪ್ರಚಾರಕ್ಕೆ ಮುಂದಾಗಬೇಕು. ಬ್ಯಾನರ್‌ಗಳಲ್ಲಿ ಅವರ ಚಿತ್ರಗಳನ್ನು ಹಾಕುವ ಮತ್ತು ಬಿಡುವ ಬಗ್ಗೆ ಸ್ಥಳೀಯ ಘಟಕದವರು ನೋಡಿಕೊಳ್ಳುತ್ತಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.