ADVERTISEMENT

ಬೆಂಗಳೂರು | ಬಿಜೆಪಿ ಸೇರಿದ ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ

ಇ.ಎಸ್.ಸುಧೀಂದ್ರ ಪ್ರಸಾದ್
Published 17 ಏಪ್ರಿಲ್ 2024, 11:37 IST
Last Updated 17 ಏಪ್ರಿಲ್ 2024, 11:37 IST
ಅಖಂಡ ಶ್ರೀನಿವಾಸಮೂರ್ತಿ
ಅಖಂಡ ಶ್ರೀನಿವಾಸಮೂರ್ತಿ   

ಬೆಂಗಳೂರು: ಬೆಂಗಳೂರಿನ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಬುಧವಾರ ಬಿಜೆಪಿ ಸೇರಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ನಿರಾಕರಿಸಿದ್ದರಿಂದ ಅವರು ಬಿಎಸ್‌ಪಿಯಿಂದ  ಸ್ಪರ್ಧಿಸಿ ಸೋತಿದ್ದರು. ಪುಲಿಕೇಶಿನಗರ ಕ್ಷೇತ್ರ ಬೆಂಗಳೂರು ಉತ್ತರ ಕ್ಷೇತ್ರದ ವ್ಯಾಪ್ತಿಗೆ ಬರಲಿದ್ದು, ಇವರ ಸೇರ್ಪಡೆಯಿಂದ ಬಿಜೆಪಿ ಅಭ್ಯರ್ಥಿಗೆ ಅನುಕೂಲವಾಗುತ್ತದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಬಿ.ಎಸ್‌.ಯಡಿಯೂರಪ್ಪ, 'ಈ ಹಿಂದೆ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆಯ ಸಂದರ್ಭದಲ್ಲಿ ಅಖಂಡ ಶ್ರೀನಿವಾಸಮೂರ್ತಿಗೆ ಮನೆಗೆ ಬೆಂಕಿ ಇಟ್ಟು ಸುಟ್ಟು ಹಾಕಿದಾಗ ಕಾಂಗ್ರೆಸ್‌ ಪಕ್ಷ ಇವರ ನೆರವಿಗೆ ಬರಲಿಲ್ಲ. ಅವರನ್ನು ಬೆಂಬಲಿಸದೇ ಮೌನವಾಗಿತ್ತು. ಆಗ ನಾವು ಅವರ ಬೆಂಬಲಕ್ಕೆ ನಿಂತೆವು. ಈಗ ಅವರು ತಮ್ಮ ಬೆಂಬಲಿಗರೊಂದಿಗೆ ಪಕ್ಷವನ್ನು ಸೇರಿದ್ದಾರೆ. ಇದರಿಂದ ಪಕ್ಷದ ಶಕ್ತಿ ಹೆಚ್ಚಾಗಿದ್ದು, ಶೋಭಾ ಅವರು ಎರಡೂವರೆ ಲಕ್ಷ ಅಂತರದಿಂದ ಗೆಲ್ಲುವುದು ನಿಶ್ಚಿತ" ಎಂದು ಹೇಳಿದರು.

ADVERTISEMENT

ಅಖಂಡ ಶ್ರೀನಿವಾಸಮೂರ್ತಿ ಮಾತನಾಡಿ, ‘2018 ರ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನು ಗೆದ್ದಿದ್ದೆ. ಆದರೆ 2023 ರ ಚುನಾವಣೆಯಲ್ಲಿ ಟಿಕೆಟ್‌ ತಪ್ಪಿಸಿದರು. ನನ್ನದಲ್ಲದ ತಪ್ಪಿಗೆ ನನ್ನ ಮನೆ ಸುಟ್ಟು ಹಾಕಿದರು. ಆಗ ಕಾಂಗ್ರೆಸ್‌ ಬೆಂಬಲಕ್ಕೆ ನಿಲ್ಲಲಿಲ್ಲ. ಇವತ್ತು ಶ್ರೀರಾಮನವಮಿಯ ದಿನ. ಇಂದೇ ನನಗೆ ಬಿಜೆಪಿ ಸೇರಲು ಅವಕಾಶ ನೀಡಿದೆ. ಬಿಜೆಪಿ ಸೇರಲು ಶ್ರೀರಾಮನ ಆಶೀರ್ವಾದವೇ ಕಾರಣ’ ಎಂದು ಹೇಳಿದರು.

ನನ್ನ ಕ್ಷೇತ್ರದಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತರು ಒಗ್ಗಟ್ಟಾಗಿದ್ದೇವೆ. ನನ್ನ ಮನೆಗೆ ಬೆಂಕಿ ಹಚ್ಚಿದವರು ಹೊರಗಡೆ ಓಡಾಡಿಕೊಂಡಿದ್ದಾರೆ. ಕಾಂಗ್ರೆಸ್‌ ಪದವಿಗಳನ್ನು ಪಡೆದುಕೊಂಡಿದ್ದಾರೆ. ಅಮಾಯಕರು ಜೈಲಿನಲ್ಲಿದ್ದರೆ ಅದಕ್ಕೆ ನಾನು ಕಾರಣನಲ್ಲ. ಕಾಂಗ್ರೆಸ್‌ನಲ್ಲಿ ಟಿಕೆಟ್‌ ತಪ್ಪಿಸಿದ್ದು ಒಳ್ಳೆಯೇ ಆಯಿತು. ಇದರಿಂದ ನಾನು ಬಿಜೆಪಿ ಸೇರುವಂತಾಯಿತು. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಲೋಕಸಭಾ ಚುನಾವಣೆಯಲ್ಲಿ ಶೋಭಾ ಅವರಿಗೆ ಪುಲಿಕೇಶಿ ಕ್ಷೇತ್ರದಿಂದ ಹೆಚ್ಚು ಲೀಡ್‌ ಕೊಡಿಸುವುದಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.