ADVERTISEMENT

ವಿಜಯಪುರ | ಸಾಸನೂರ, ಬೆಳ್ಳುಬ್ಬಿ, ಕಾಸುಗೌಡಗೆ ಬಿಜೆಪಿ ಟಿಕೆಟ್‌

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2023, 18:26 IST
Last Updated 12 ಏಪ್ರಿಲ್ 2023, 18:26 IST
   

ವಿಜಯಪುರ: ದೇವರಹಿಪ್ಪರಗಿ, ಇಂಡಿ ಮತ್ತು ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರಗಳಿಗೆ ಬುಧವಾರ ರಾತ್ರಿ ಬಿಜೆಪಿ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ.

ದೇವರಹಿಪ್ಪರಗಿಗೆ ಹಾಲಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಬಸವನ ಬಾಗೇವಾಡಿಗೆ ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ ಹಾಗೂ ಇಂಡಿ ಕ್ಷೇತ್ರಕ್ಕೆ ಕಾಸುಗೌಡ ಬಿರಾದಾರ ಅವರಿಗೆ ಟಿಕೆಟ್‌ ನೀಡಲಾಗಿದೆ.

ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದು ಮತ್ತು ಎರಡನೇ ಪಟ್ಟಿ ಸೇರಿದಂತೆ ಇರುವರೆಗೆ ಏಳು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಆದರೆ, ನಾಗಠಾಣ ಮೀಸಲು(ಎಸ್‌ಸಿ) ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡಿಲ್ಲ. ನಾಗಠಾಣ ಕ್ಷೇತ್ರಕ್ಕೆ ಸಚಿವ ಗೋವಿಂದ ಕಾರಜೋಳ ಅವರ ಪುತ್ರ ಗೋಪಾಲ ಕಾರಜೋಳ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇನ್ನುಳಿದಂತೆ ಸಂಸದ ರಮೇಶ ಜಿಗಜಿಣಗಿ, ಇತ್ತೀಚೆಗೆ ಲೋಕಾಯುಕ್ತ ಸಿಪಿಐ ಹುದ್ದೆಗೆ ರಾಜೀನಾಮೆ ನೀಡಿರುವ ಮಹೇಂದ್ರ ಚವ್ಹಾಣ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಯಾರಿಗೆ ಟಿಕೆಟ್‌ ಸಿಗಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ADVERTISEMENT

ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಹಾಲಿ ಶಾಸಕರಾದ ಎ.ಎಸ್‌.ಪಾಟೀಲ ನಡಹಳ್ಳಿ(ಮುದ್ದೇಬಿಹಾಳ), ಬಸವನಗೌಡ ಪಾಟೀಲ ಯತ್ನಾಳ(ವಿಜಯಪುರ), ರಮೇಶ ಭೂಸನೂರ(ಸಿಂದಗಿ), ಸೋಮನಗೌಡ ಪಾಟೀಲ ಸಾಸನೂರ(ದೇವರ ಹಿಪ್ಪರಗಿ) ಅವರಿಗೆ ಟಿಕೆಟ್‌ ನೀಡಲಾಗಿದೆ. ಇನ್ನುಳಿದಂತೆ ಬಸವನ ಬಾಗೇವಾಡಿಗೆ ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ, ಬಬಲೇಶ್ವರ ಕ್ಷೇತ್ರಕ್ಕೆ ವಿಜುಗೌಡ ಪಾಟೀಲ ಮತ್ತು ಇಂಡಿಗೆ ಕಾಸುಗೌಡ ಬಿರಾದಾರ ಅವರಿಗೆ ಟಿಕೆಟ್‌ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.