ಅಥಣಿ (ಬೆಳಗಾವಿ ಜಿಲ್ಲೆ): ‘ಲಕ್ಷ್ಮಣ ಸವದಿ ಹಾಗೂ ಜಗದೀಶ ಶೆಟ್ಟರ್ ಬಗ್ಗೆ ಮಾತನಾಡುವ ನೈತಿಕತೆ ಯಡಿಯೂರಪ್ಪ ಅವರಿಗೆ ಇಲ್ಲ. ಬಿಜೆಪಿ ಮುಳುಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ’ ಎಂದು ಅಥಣಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿ ತಿರುಗೇಟು ನೀಡಿದರು.
ಪಟ್ಟಣದಲ್ಲಿ ಭಾನುವಾರ ಕರೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿಯೂ ಪಕ್ಷವನ್ನು ಬಿಟ್ಟು ಹೋದವರು. ನಮ್ಮ ಬಗ್ಗೆ ಟೀಕಿಸುವ ಮುನ್ನ ತಮ್ಮ ಹಿಂದಿನ ವಿಚಾರಗಳನ್ನು ಸ್ವಲ್ಪ ವಿಚಾರ ಮಾಡಿ ಮಾತನಾಡಬೇಕು’ ಎಂದರು.
‘ಯಡಿಯೂರಪ್ಪ ಬಗ್ಗೆ ಹೆಚ್ಚು ಮಾತನಾಡಿ ಪ್ರಯೋಜನವಿಲ್ಲ. ರಾಜ್ಯದ ವಿವಿಧೆಡೆ ಪ್ರಚಾರ ಮಾಡಬೇಕು, ನನ್ನ ನೇತೃತ್ವದಲ್ಲಿ 15 ರಿಂದ 20 ಸ್ಥಾನ ಗೆಲ್ಲಿಸಬೇಕು ಎಂದು ಕಾಂಗ್ರೆಸ್ ನಾಯಕರು ನನಗೆ ಜವಾಬ್ದಾರಿ ನೀಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪೂರಕ ವಾತಾವರಣವಿದೆ. 125ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ’ ಎಂದರು.
ಕಾಂಗ್ರೆಸ್ ಟಿಕೆಟ್ ವಂಚಿತ ಗಜಾನನ ಮಂಗಸೂಳಿ ಮಾತನಾಡಿ, ‘ಲಕ್ಷ್ಮಣ ಸವದಿ ಮೂಲ ಕಾಂಗ್ರೆಸ್ಸಿಗರನ್ನು ಬಿಟ್ಟು ಮತ್ತೊಂದು ಬಣ ಮಾಡಬಹುದೆಂಬ ಅಳುಕಿತ್ತು. ಆದರೆ, ಎಲ್ಲರೂ ಜತೆಯಾಗಿ ಹೋಗೋಣ ಎಂದು ಅವರು ಹೇಳಿದ್ದಾರೆ. ಹೀಗಾಗಿ, ಬಂಡಾಯದ ಮಾತೇ ಇಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.