ADVERTISEMENT

ಲಿಂಗಾಯತ ಮುಖ್ಯಮಂತ್ರಿ ಘೋಷಣೆ ಬಗ್ಗೆ ನಿರ್ಣಯ ಆಗಿಲ್ಲ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2023, 6:27 IST
Last Updated 20 ಏಪ್ರಿಲ್ 2023, 6:27 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ    

ಬೆಂಗಳೂರು: ‘ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಲಿಂಗಾಯತ ನಾಯಕರ ಸಭೆಯಲ್ಲಿ, ಲಿಂಗಾಯತ ಮುಖ್ಯಮಂತ್ರಿ ಘೋಷಣೆ ಬಗ್ಗೆ ಯಾವುದೇ ನಿರ್ಣಯ ಆಗಿಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಈ ಸಭೆಯಲ್ಲಿ ಸದ್ಯದ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಮತ್ತು ಕಾಂಗ್ರೆಸ್‌ನವರ ಅಪಪ್ರಚಾರಕ್ಕೆ ಹೇಗೆ ಪ್ರತ್ತುತ್ತರ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆದಿದೆ. ಲಿಂಗಾಯತ ಮುಖ್ಯಮಂತ್ರಿ ಬಗ್ಗೆಯೂ ಕೆಲವರು ಸಲಹೆ ಕೊಟ್ಟಿದ್ದಾರೆ. ಸಭೆಯಲ್ಲಿ ಧರ್ಮೇಂದ್ರ ಪ್ರಧಾನ್ ಕೂಡಾ ಇದ್ದರು. ಸಭೆಯಲ್ಲಿ ವ್ಯಕ್ತವಾಗಿರುವ ಭಾವನೆಗಳನ್ನು ವರಿಷ್ಠರಿಗೆ ತಿಳಿಸುವುದಾಗಿ ಅವರು ಹೇಳಿದ್ದಾರೆ’ ಎಂದರು.

ಕಾಂಗ್ರೆಸ್‌ನದ್ದು ಲಿಂಗಾಯತ ವಿರೋಧಿ ನಡೆ: ‘1967ರಿಂದ ಈವರೆಗೆ 50 ವರ್ಷದಲ್ಲಿ ಒಬ್ಬ ಲಿಂಗಾಯತರನ್ನು ಕಾಂಗ್ರೆಸ್ ಮುಖ್ಯಮಂತ್ರಿ ಮಾಡಿಲ್ಲ. ಈ ಮಧ್ಯೆ, ವಿರೇಂದ್ರ ಪಾಟೀಲರು ಒಂಬತ್ತು ತಿಂಗಳು ಮುಖ್ಯಮಂತ್ರಿಗಳಾಗಿದ್ದರೂ ಅರನ್ನು ಕಾಂಗ್ರೆಸ್ ಸರಿಯಾಗಿ ನಡೆಸಿಕೊಳ್ಳಲಿಲ್ಲ. ವಿಮಾನ ನಿಲ್ದಾಣದಲ್ಲಿಯೇ ಅವರನ್ನು ತೆಗೆದು ಹಾಕಲಾಗಿದೆ’ ಎಂದರು.

ADVERTISEMENT

‘ರಾಜಶೇಖರ ಮೂರ್ತಿ ಅವರನ್ನು ನಡೆಸಿಕೊಂಡ ರೀತಿಯೂ ಸರಿಯಲ್ಲ. ಲಿಂಗಾಯತ ಧರ್ಮವನ್ನು ಒಡೆಯಲು ಕಾಂಗ್ರೆಸ್ ಪ್ರಯತ್ನಿಸಿತ್ತು. ಮತ ಬ್ಯಾಂಕ್‌ಗಾಗಿ ಧರ್ಮ ಒಡೆಯಲು ಹೋಗಿದ್ದನ್ನು ಜನ‌ ಮರೆಯುವುದಿಲ್ಲ. ಕಾಂಗ್ರೆಸ್‌ನವರು ದಲಿತರು, ಹಿಂದುಳಿದವರು, ಲಿಂಗಾಯತರಿಗೆ ಮೋಸ ಮಾಡಿದ್ದಾರೆ‘ ಎಂದು ಅವರು ಆರೋಪಿಸಿದರು.

‘ನಾಮಪತ್ರ ಪ್ರಕ್ರಿಯೆ ನಂತರ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಪ್ರಚಾರಕ್ಕೆ ಬರಲಿದ್ದಾರೆ‘ ಎಂದೂ ಅವರು ತಿಳಿಸಿದರು.

‘ಸಚಿವ ಆರ್‌. ಅಶೋಕ ಅವರಿಗೆ ಕನಕಪುರದಲ್ಲಿ ಮಿಲಿಟರಿ ಹೊಟೇಲ್ ಗೆ ಬಂದು ಹೋಗಿ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆ ಬಗ್ಗೆ ಪ್ರತಿ್ಕ್ರಿಯಿಸಿದ ಮುಖ್ಯಮಂತ್ರಿ, ‘ನಮ್ಮ ಪ್ರಚಾರ ಮಿಲಿಟರಿ ಹೊಟೇಲಿನಿಂದಲೇ ಆರಂಭವಾಗಲಿದೆ. ಅಲ್ಲಿ ಸ್ಥಳೀಯ ಸಾಮಾನ್ಯ ಜನರಿರುತ್ತಾರೆ. ಅಂಥ ಸಾಮಾನ್ಯ ಜನರನ್ನು ಶಿವಕುಮಾರ್‌ ಭೇಟಿ ಮಾಡುವುದಿಲ್ಲ. ಸಾಮಾನ್ಯ ಜನರನ್ನು ಭೇಟಿ ಮಾಡಲು ಅಶೋಕ ತೆರಲಿದ್ದಾರೆ‘ ಎಂದರು.

‘ಮಿಲಿಟರಿ ಹೊಟೇಲ್‌ಗೆ ಯಾಕೆ ಹೋಗಬಾರದು ಎಂದು ಪ್ರಶ್ನಿಸಿದರು. ಅದರಲ್ಲಿ ತಪ್ಪೇನಿದೆ’ ಎಂದೂ ಅವರು ಪ್ರಶ್ನಿಸಿದರು

‘ಪಕ್ಷದಿಂದ ವಲಸೆ ಹೋದವರನ್ನು ವಾಪಸ್ಸು ಕರೆತರುವ ಕೆಲಸ ಮಾಡುತ್ತಿದ್ದು, ಜಿಲ್ಲಾ, ಹೋಬಳಿ ಮಟ್ಟದಲ್ಲಿ ಆ ಕೆಲಸ ಮಾಡಲಾಗುತ್ತಿದೆ’ ಎಂದೂ ಬೊಮ್ಮಾಯಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.