ADVERTISEMENT

ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಿ; ಮುನಿಯಪ್ಪ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 13:13 IST
Last Updated 9 ಏಪ್ರಿಲ್ 2019, 13:13 IST
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಕೆ.ಎಚ್‌. ಮುನಿಯಪ್ಪ ಮಾತನಾಡಿದರು
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಕೆ.ಎಚ್‌. ಮುನಿಯಪ್ಪ ಮಾತನಾಡಿದರು   

ರಾಮನಗರ: ‘ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಉಳಿವಿಗಾಗಿ ಮತದಾರರು ಜಾತ್ಯತೀತ ಮನೋಭಾವದ ಪಕ್ಷಗಳನ್ನು ಬೆಂಬಲಿಸಬೇಕು’ ಎಂದು ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್. ಮುನಿಯಪ್ಪ ಮನವಿ ಮಾಡಿದರು.

‘ಮೋದಿ ಅಧಿಕಾರಕ್ಕೆ ಬಂದ ಮೇಲೆ ರೈತರ ಆತ್ಮಹತ್ಯೆ ಹೆಚ್ಚಿದೆ. ದಲಿತರು ನೆಮ್ಮದಿ ಕಳೆದುಕೊಂಡಿದ್ದಾರೆ. ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಕೋಮು ಗಲಭೆಗಳು ಹೆಚ್ಚುತ್ತಿವೆ. ಒಟ್ಟಾರೆ ಬಿಜೆಪಿ ನಡೆಯೇ ಪ್ರಜಾಪ್ರಭುತ್ವ ವಿರೋಧಿ ಆಗಿದೆ. ದೇಶಕ್ಕೆ ಇದರಿಂದ ಗಂಡಾಂತರ ಖಚಿತ. ಇದನ್ನು ತಪ್ಪಿಸಬೇಕಾದರೆ ಕೋಮುವಾದಿಗಳನ್ನು ಅಧಿಕಾರದಿಂದ ದೂರ ಇಡಬೇಕಿದೆ’ ಎಂದು ಅವರು ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅಂಬೇಡ್ಕರ್‌ ಪ್ರತಿಮೆ ತೆರವುಗೊಳಿಸುವುದಾಗಿ ಹೇಳುತ್ತಾರೆ. ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಸಂವಿಧಾನವನ್ನೇ ಬದಲಿಸುವ ಮಾತುಗಳನ್ನಾಡುತ್ತಾರೆ.
ಸಂವಿಧಾನ ಒಂದು ಧರ್ಮ, ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ಸಂವಿಧಾನದಲ್ಲಿನ ಅಂಶಗಳು ಮತ್ತು ಕಾಂಗ್ರೆಸ್ ಸೈದ್ಧಾಂತಿಕ ಸಿದ್ಧಾಂತ ಒಂದೇಯಾಗಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಜಾತ್ಯತೀತ ಪಕ್ಷಗಳು ಸೈದ್ಧಾಂತಿಕವಾಗಿ ಒಗ್ಗೂಡಿ ಮುನ್ನಡೆಯುತ್ತಿವೆ. ರಾಹುಲ್‌ ಗಾಂಧಿ ಈ ಬಾರಿ ದೇಶದ ಪ್ರಧಾನಿ ಆಗಲಿದ್ದಾರೆ ಎಂದರು.

ADVERTISEMENT

ಪ್ರಜ್ಞಾವಂತ ಮತದಾರರು ಇದೆನ್ನೆಲ್ಲ ಯೋಚಿಸಿ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.
ಮನಮೋಹನಸಿಂಗ್‌ ನೇತೃತ್ವದ ಯುಪಿಎ ಸರ್ಕಾರವು ರೈತರ ಸಾಲ ಮನ್ನಾ ಮಾಡಿತ್ತು. ಆದರೆ ಬಿಜೆಪಿ ಸರ್ಕಾರ ನೋಟು ಅಮಾನ್ಯೀಕರಣ, ಜಿಎಸ್‌ಟಿ ಮೂಲಕ ಜನರನ್ನು ಪೀಡಿಸಿತು. ರೈತರ ಸಾಲ ಮನ್ನಾ ಮಾಡಲಾಗದವರು ಉದ್ಯಮಿಗಳ ₨2.5 ಲಕ್ಷ ಕೋಟಿ ಮನ್ನಾ ಮಾಡಿದ್ದು ಏಕೆ ಎಂದು ಪ್ರಶ್ನಿಸಿದರು.

ಡಿ.ಕೆ. ಸುರೇಶ್‌ ಸಂಸದರಾಗಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಇಲ್ಲಿನ ಮತದಾರರು ಅವರನ್ನು ಹೆಚ್ಚಿನ ಅಂತರದಿಂದ ಗೆಲ್ಲಿಸಬೇಕು ಎಂದು ಕೋರಿದರು.

ಪಕ್ಷದ ಮುಖಂಡರಾದ ಲೋಕೇಶ್‌, ಜಿಲ್ಲಾ ಘಟಕದ ಅಧ್ಯಕ್ಷ ಎಸ್‌. ಗಂಗಾಧರ್‌, ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡ ಘಟಕದ ಅಧ್ಯಕ್ಷ ರಾಂಪುರ ನಾಗೇಶ್‌ ಇದ್ದರು.

*ದೇಶ ಸದ್ಯ ದೊಡ್ಡ ಗಂಡಾಂತರದಲ್ಲಿ ಇದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಶೋಷಿತರು, ಅಲ್ಪಸಂಖ್ಯಾತ ರಿಗೆ ಉಳಿಗಾಲ ಇಲ್ಲದಂತೆ ಆಗುತ್ತದೆ
–ಕೆ.ಎಚ್‌. ಮುನಿಯಪ್ಪ,ಕಾಂಗ್ರೆಸ್ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.