ಕಲಬುರ್ಗಿ: ‘ಬಡವರ ಪರವಾದ ಕಾರ್ಯಕ್ರಮಗಳನ್ನು ವಿರೋಧಿಸುವ ಮತ್ತು ಗೇಲಿ ಮಾಡುವ ಒಂದು ವರ್ಗವೇ ಇದೆ. ಕೆಲವರು ಇದಕ್ಕಾಗಿಯೇ ಹುಟ್ಟಿದ್ದಾರೆ’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಪ್ರಣಾಳಿಕೆಯನ್ನು ಟೀಕಿಸಿದ ಬಿಜೆಪಿಗೆ ತಿರುಗೇಟು ನೀಡಿದರು.
‘ಬಿಜೆಪಿಯವರಿಗೆ ಯಾವುದು ಅಸಾಧ್ಯವೋ ಅದನ್ನು ನಾವು ಸಾಧ್ಯವಾಗಿಸಿದ್ದೇವೆ. ಅಸಾಧ್ಯವನ್ನು ಸಾಧ್ಯವಾಗಿಸುವ ಶಕ್ತಿ ಇರುವುದುಕಾಂಗ್ರೆಸ್ ಪಕ್ಷಕ್ಕೆ ಮಾತ್ರ’ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.
‘ಇಂದಿರಾಗಾಂಧಿ ಅವರು ಬ್ಯಾಂಕ್ಗಳನ್ನು ರಾಷ್ಟ್ರೀಕರಣ ಮಾಡುವಾಗಲೂ ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದರು. ನಮ್ಮ ಯುಪಿಎ ಸರ್ಕಾರ ನರೇಗಾ, ಆಹಾರ ಭದ್ರತೆ, ಶಿಕ್ಷಣ ಹಕ್ಕು ಕಾಯ್ದೆಗಳನ್ನು ಜಾರಿಗೊಳಿಸಿದಾಗ ಬಿಜೆಪಿಯವರು ಇದೇ ತೆರನಾಗಿ ಮಾತನಾಡಿದ್ದರು. ನಾವು ಅವುಗಳನ್ನೆಲ್ಲ ಸಾಧ್ಯವಾಗಿಸಲಿಲ್ಲವೇ’ ಎಂದು ಪ್ರಶ್ನಿಸಿದರು.
‘ದೇಶದ ಜನಸಂಖ್ಯೆಯಲ್ಲಿ ಶೇಕಡ 5ರಷ್ಟಿರುವ ಬಡತನ ರೇಖೆಗಿಂತ ಕೆಳಗಿರುವವರಿಗೆ ತಿಂಗಳಿಗೆ ₹6 ಸಾವಿರ ನಗದನ್ನು ನೇರವಾಗಿ ಅವರ ಖಾತೆಗೆ ವರ್ಗಾಯಿಸುವ ‘ನ್ಯಾಯ್’ ಘೋಷಣೆಯನ್ನೂ ನಾವು ಅಧಿಕಾರಕ್ಕೆ ಬಂದರೆ ಅನುಷ್ಠಾನಕ್ಕೆ ತರುತ್ತೇವೆ’ ಎಂದರು.
ಬ್ರಿಟೀಷ್ ಕಾಲದ ಕಾಯ್ದೆ: ‘ಈಗಿರುವ ದೇಶದ್ರೋಹ ಕಾಯ್ದೆ ಬ್ರಿಟೀಷರ ಕಾಲದ್ದು. ಎಲ್ಲರ ಭಾವನೆಗಳನ್ನು ಗೌರವಿಸಬೇಕು ಎಂಬುದು ನಮ್ಮ ಪಕ್ಷದ ಧ್ಯೇಯ. ಹೀಗಾಗಿ ಈಗಿನ ಕಾಲಮಾನಕ್ಕೆ ತಕ್ಕಂತೆ ಈ ಕಾಯ್ದೆಯನ್ನುಪರಿಷ್ಕರಿಸುವುದಾಗಿ ನಮ್ಮ ಪ್ರಣಾಳಿಕೆಯಲ್ಲಿ ತಿಳಿಸಿದ್ದೇವೆ. ಇದು ಹೇಗೆ ಮೂರ್ಖತನವಾಗುತ್ತದೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.