ವಿಜಯಪುರ: ‘ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಕ್ಷಮೆ ಕೇಳೋಕೆ ಅವನ್ಯಾರು? ಅವನೇನು ಮೇಲಿಂದ ಬಿದ್ದವ್ನಾ? ಇದೇ ಮೊದಲಲ್ಲ, ಹಿಂದೆಯೂ ಹೀಗೆ ಮಾಡಿದ್ದಾನೆ. ನಮ್ಮ ಧರ್ಮದ ವಿಷಯದಲ್ಲಿ ಅವನ್ದೇನ್ ಕಿರಿಕಿರಿ...’
‘ಮೊದಲು ಅವ್ನ ಸುಧಾರಣೆ ಮಾಡ್ರಿ. ಆಮೇಲೆ ನಮ್ಮನ್ನು ಸುಧಾರಿಸುವಂತ್ರೀ. ಕ್ರಿಯೆಗೆ– ಪ್ರತಿಕ್ರಿಯೆ ಇದ್ದೇ ಇರುತ್ತೆ. ನನಗಷ್ಟೇ ಅಲ್ಲ. ವಿನಾಕಾರಣ ಮೂಗು ತೂರಿಸಬೇಡ ಎಂದು ಅವನಿಗೂ ವಾರ್ನ್ ಮಾಡಿ ಮೊದಲು...’
ಗೃಹ ಸಚಿವ ಎಂ.ಬಿ.ಪಾಟೀಲ ಶುಕ್ರವಾರ ಪತ್ರಿಕಾಗೋಷ್ಠಿ ಆರಂಭಕ್ಕೂ ಮುನ್ನವೇ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಮೊಬೈಲ್ ಕರೆ ಮಾಡಿ, ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಏಕವಚನದಲ್ಲಿ ಹರಿಹಾಯ್ದರು.
ರಾಹುಲ್ಗೆ ದೂರು: ಲಿಂಗಾಯತ ಧರ್ಮದ ವಿಚಾರದಲ್ಲಿ ಸಚಿವ ಶಿವಕುಮಾರ್ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. ಅದಕ್ಕೆ ನಾನು ತುಪ್ಪ ಸುರಿಯಲ್ಲ. ಈ ವಿಷಯವನ್ನು ರಾಹುಲ್ ಗಾಂಧಿ ಗಮನಕ್ಕೆ ತರಲಾಗುವುದು’ ಎಂದು ಪಾಟೀಲ ತಿಳಿಸಿದರು.
‘ಕ್ಷಮೆ ಕೋರುವ ಅಧಿಕಾರವನ್ನು ಶಿವಕುಮಾರ್ಗೆ ಕೊಟ್ಟವರು ಯಾರು? ಮೊದಲು ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸಂಘಟಿಸಲಿ. ಶಿವಕುಮಾರ್ ಉದ್ದೇಶ ಏನೆಂಬುದು ಗೊತ್ತಾಗಿದೆ’ ಎಂದರು.
ಮುಗಿದ ಅಧ್ಯಾಯ: ಶಾಮನೂರು
ಕಲಬುರ್ಗಿ: ‘ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಮುಗಿದ ಅಧ್ಯಾಯ’ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವೀರಶೈವ–ಲಿಂಗಾಯತ ಎರಡೂ ಒಂದೇ. ಎಲ್ಲರೂ ಒಗ್ಗಟ್ಟಾಗಿದ್ದೇವೆ. ಹೊಡೆದಾಟ, ಬಡಿದಾಟ ಏನಿದ್ದರೂ ಸ್ವಾಮೀಜಿಗಳದ್ದೇ ನಡೆಯುತ್ತಿದೆ’ ಎಂದರು.
‘ವೀರಶೈವ–ಲಿಂಗಾಯತರ ಮಧ್ಯೆ ಭಿನ್ನಮತ ಇಲ್ಲ. ಸ್ವಾಮೀಜಿಗಳನ್ನು ರಾಜಕೀಯದಿಂದ ದೂರವಿಟ್ಟರೆ ಎಲ್ಲವೂ ಸರಿ ಹೋಗುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.