ADVERTISEMENT

ಲಿಂಗೇಗೌಡರಿಗೆ ಒಲಿಯದ ವಿಜಯಲಕ್ಷ್ಮೀ

ನಾಲ್ಕು ಬಾರಿ ಗೆಲುವು: ಎಂ.ಕೆ. ಶಿವನಂಜಪ್ಪ ದಾಖಲೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2014, 5:36 IST
Last Updated 24 ಮಾರ್ಚ್ 2014, 5:36 IST

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ 1952 ರಿಂದ ನಡೆದ ಮೊದಲ ನಾಲ್ಕೂ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದ ಎಂ.ಕೆ. ಶಿವನಂಜಪ್ಪ ಅವರ ವಿರುದ್ಧ ಸತತವಾಗಿ ಮೂರು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಎಂ.ಸಿ. ಲಿಂಗೇಗೌಡರು ಒಂದೊಂದು ಬಾರಿ ಒಂದೊಂದು ಪಕ್ಷದಿಂದ ಸ್ಪರ್ಧಿಸಿದರೂ ಎಂ.ಸಿ. ಲಿಂಗೇಗೌಡರಿಗೆ ಗೆಲುವು ದಕ್ಕಲಿಲ್ಲ.

ಮೊದಲ ಚುನಾವಣೆಯಲ್ಲಿ ಕಿಸಾನ್‌ ಮಜ್ದೂರ್‌ ಪಾರ್ಟಿ, ಎರಡನೇ ಚುನಾವಣೆಯಲ್ಲಿ ಪ್ರಜಾ ಸೋಷಯಲಿಸ್ಟ್‌್  ಪಾರ್ಟಿಯಿಂದ ಮೂರನೇ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದರೂ ಪ್ರತಿ ಚುನಾವಣೆಯಲ್ಲಿ ಲಿಂಗೇಗೌಡರ ವಿರುದ್ಧದ ಶಿವನಂಜಪ್ಪ ಅವರ ಗೆಲುವಿನ ಅಂತರ ಹೆಚ್ಚಾಗುತ್ತಲೇ ಸಾಗುತ್ತದೆ.

1957ರಲ್ಲಿ ನಡೆದ ಎರಡನೇ ಚುನಾವಣೆಯಲ್ಲಿ ಶಿವನಂಜಪ್ಪ ಅವರು ಕಾಂಗ್ರೆಸ್‌ ಪಕ್ಷದ ವತಿಯಿಂದ ಸ್ಪರ್ಧೆಗೆ ಇಳಿದರೆ, ಮೊದಲ ಚುನಾವಣೆಯಲ್ಲಿ ಎದುರಾಳಿಯಾಗಿದ್ದ ಎಂ.ಸಿ. ಲಿಂಗೇಗೌಡರೇ ಎದುರಾಳಿಯಾಗುತ್ತಾರೆ. ಅವರ ಕೆಎಂಪಿಪಿ ಪಕ್ಷದ ಬದಲಾಗಿ ಪ್ರಜಾ ಸೋಶಿಯಲಿಸ್ಟ್‌ ಪಾರ್ಟಿಯಿಂದ ಸ್ಪರ್ಧಿಸಿರುತ್ತಾರೆ.

ಮೊದಲ ಬಾರಿಗೆ ಜಯ ಗಳಿಸಿದ್ದ ಶಿವನಂಜಪ್ಪ ಅವರ ಜನಪರವಾದ ಕಾಳಜಿಯಿಂದಾಗಿ ಎರಡನೇ ಬಾರಿಗೂ ಜನರು ಅವರ ಕೈ ಹಿಡಿಯುತ್ತಾರೆ ಅಷ್ಟೇ ಅಲ್ಲ, ಗೆಲುವಿನ ಅಂತರವು 52,671 ಮತಗಳಿಗೆ ಹೆಚ್ಚಾಗುತ್ತದೆ.

1962ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಶಿವನಂಜಪ್ಪ ಅವರ ವಿರುದ್ಧ ಲಿಂಗೇಗೌಡರು ಪಕ್ಷೇತರರಾಗಿ ಕಣಕ್ಕೆ ಇಳಿಯುತ್ತಾರೆ. ಈ ಬಾರಿ ಇವರಿಬ್ಬರೊಂದಿಗೆ ಎಚ್‌್್. ವೀರಣ್ಣಗೌಡ, ಎಂ.ಎಸ್‌್್. ಸಿದ್ದಪ್ಪ, ಎನ್‌್್್್. ಕೆಂಪಣ್ಣ ಸ್ಪರ್ಧಿಸುತ್ತಾರೆ.

ಲಿಂಗೇಗೌಡರ ಪರವಾಗಿ ಅನುಕಂಪದ ಅಲೆ ಬರಬಹುದು ಎನ್ನುವ ನಿರೀಕ್ಷೆ ಸುಳ್ಳಾಗುತ್ತದೆ. ಶಿವನಂಜಪ್ಪ ಅವರು 74,323 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್‌್ ಗೆಲುವು ಸಾಧಿಸುತ್ತಾರೆ.

1967ರಲ್ಲಿ ಕಾಂಗ್ರೆಸ್‌ ಪರವಾಗಿ ನಾಲ್ಕನೇ ಬಾರಿಗೂ ಎಂ.ಕೆ. ಶಿವನಂಜಪ್ಪ ಅವರನ್ನೇ ಕಣಕ್ಕೆ ಇಳಿಸುತ್ತಾರೆ. ಆದರೆ, ಎದುರಾಳಿ ಮಾತ್ರ ಬದಲಾಗುತ್ತಾರೆ.

ನಾಲ್ವಡಿ ಕೃಷ್ಣರಾಜ್‌ ಒಡೆಯರ್‌ ಅವರ ಆಳ್ವಿಕೆಯಲ್ಲಿ ಜನಪ್ರತಿನಿಧಿ, ಮಂಡ್ಯ ಪುರಸಭೆ (ಆಗಿನದ್ದು), ಆರ್‌ಎಪಿಸಿಎಂಎಸ್‌್ ಅಧ್ಯಕ್ಷರಾಗಿದ್ದ ಜೆ. ದೇವಯ್ಯ ಅವರು ಪಕ್ಷೇತರರಾಗಿ ಕಣಕ್ಕೆ ಇಳಿಯುತ್ತಾರೆ. ಇಷ್ಟಲ್ಲದೇ, 1962ರ ಮಂಡ್ಯ ವಿಧಾನಸಭಾ ಚುನಾವಣೆಯಲ್ಲಿ ನಿತ್ಯ ಸಚಿವ ಎಂಬ ಬಿರುದು ಹೊಂದಿದ್ದ ಕೆ.ವಿ. ಶಂಕರಗೌಡ ಅವರನ್ನು ಸೋಲಿಸಿದ ಹಿರಿಮೆಯೂ ಇವರ ಜತೆಗಿತ್ತು.

ಆ ಚುನಾವಣೆಯು ಪ್ರತಿಷ್ಠೆಯ ಕಣವಾಗಿತ್ತು. ಪ್ರತಿ ಹಂತದಲ್ಲಿಯೂ ಜಿದ್ದಾ, ಜಿದ್ದಿನ ಹೋರಾಟವಿತ್ತು. ಆ ನಡುವೆಯೂ ಶಿವನಂಜಪ್ಪ ಅವರು 46,484 ಮತಗಳ ಅಂತರದಿಂದ ನಾಲ್ಕನೇ ಬಾರಿಗೆ ಜಯ ಸಾಧಿಸುತ್ತಾರೆ. ಸತತವಾಗಿ ನಾಲ್ಕು ಬಾರಿ ಗೆದ್ದ ಅವರ ದಾಖಲೆಯನ್ನು ಇಂದಿಗೂ ಯಾರಿಂದಲೂ ಮುರಿಯಲು  ಸಾಧ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.