ADVERTISEMENT

ಇತ್ತ ಸುಮಲತಾ ಸಭೆ, ಅತ್ತ ಕುಮಾರಸ್ವಾಮಿ ತಂತ್ರ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2019, 20:06 IST
Last Updated 20 ಮಾರ್ಚ್ 2019, 20:06 IST

ಮಂಡ್ಯ: ಒಂದೆಡೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸುಮಲತಾ ನಗರದಲ್ಲಿ ಬಹಿರಂಗ ಸಭೆ ನಡೆಸಿದರೆ, ಇನ್ನೊಂದೆಡೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಜೆಡಿಎಸ್‌ ಮುಖಂಡರ ಸಭೆ ನಡೆಸಿ ಪುತ್ರ, ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ನಿಖಿಲ್‌ ಗೆಲುವಿಗೆ ತಂತ್ರ ರೂಪಿಸಿದರು.

ಮಂಗಳವಾರ ರಾತ್ರಿಯೇ ಕೆಆರ್‌ಎಸ್‌ ಬಳಿಯ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದ ಕುಮಾರಸ್ವಾಮಿ ಬುಧವಾರ ದಿನವಿಡೀ ಜೆಡಿಎಸ್‌ ಸಚಿವರು, ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಜಿಲ್ಲಾ ಪಂಚಾಯಿತಿ ಸದಸ್ಯರ ಸಭೆ ನಡೆಸಿದರು. ನಗರದಲ್ಲಿ ನಡೆಯುತ್ತಿದ್ದ ಸುಮಲತಾ ಸಮಾವೇಶದ ಬಗ್ಗೆ ಬೆಂಬಲಿಗರಿಂದ ಮಾಹಿತಿ ಪಡೆದುಕೊಂಡರು.

ಕಾದು ನೋಡಿ: ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ ‘ನಿಖಿಲ್ ಅವರ ಎದುರಾಳಿಯ ಜತೆ ಇರುವವರ ಮತಗಳು ಜೆಡಿಎಸ್ ಪಕ್ಷಕ್ಕೆ ಬರಲಿವೆ. ಕಾದು ನೋಡಿ. ನಿಖಿಲ್‌ಗೆ ಜಿಲ್ಲೆಯ ರೈತರ ಬಗ್ಗೆ ಕಾಳಜಿ ಇದೆ. ಆತ್ಮಹತ್ಯೆ ಮಾಡಿಕೊಂಡ ರೈತರನ ಪತ್ನಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಅವರ ಮಕ್ಕಳಿಗೆ ಸ್ವಂತ ಹಣದಿಂದ ಚಿಕಿತ್ಸೆ ಕೊಡಿಸುತ್ತಿದ್ದಾನೆ. ನಿಖಿಲ್ ಮಾನವೀಯ ಗುಣವುಳ್ಳ ಪ್ರಜ್ಞಾವಂತ. ರಾಜಕೀಯ ಪ್ರಜ್ಞೆಯೂ ಇದೆ. ಹಾಗಾಗಿ ಪಕ್ಷ ಕಣಕ್ಕೆ ಇಳಿಸಿದೆ' ಎಂದರು.

ADVERTISEMENT

ಸಚಿವ ಸಾ.ರಾ.ಮಹೇಶ್‌ ಮಾತನಾಡಿ 'ಸಾಮಾಜಿಕ ಜಾಲತಾಣಗಳಲ್ಲಿ ಬರುವ ಟೀಕೆ ಟಿಪ್ಪಣಿಗಳಿಗೆ ಪ್ರತಿಕ್ರಿಯೆ ನೀಡದಂತೆ ಜಿಲ್ಲೆಯ ಸಚಿವರು, ಶಾಸಕರಿಗೆ ಸೂಚಿಸಲಾಗಿದೆ. ಜೆಡಿಎಸ್ ಕಾರ್ಯಕರ್ತರು ಆವೇಶಕ್ಕೆ ಒಳಗಾಗಬಾರದು. ಎದುರಾಳಿಯ ಬಗ್ಗೆ ಗೌರವ ಇಟ್ಟುಕೊಂಡು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಗೆಲುವಿಗೆ ಹೋರಾಟ ಮಾಡಬೇಕು ಎಂದು ಮುಖ್ಯಮಂತ್ರಿಗಳು
ಸೂಚಿಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.