ADVERTISEMENT

ಶಾಪ ವಿಮೋಚನೆಗಾಗಿ ಮಂಜಪ್ಪ ಕಣಕ್ಕೆ: ಡಿ. ಬಸವರಾಜ್

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2019, 15:40 IST
Last Updated 30 ಏಪ್ರಿಲ್ 2019, 15:40 IST
ದಾವಣಗೆರೆಯಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್‌ ಎಸ್‌ಸಿ ಘಟಕದ ಸಭೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಚ್‌. ವೀರಭದ್ರಪ್ಪ ಮಾತನಾಡಿದರು
ದಾವಣಗೆರೆಯಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್‌ ಎಸ್‌ಸಿ ಘಟಕದ ಸಭೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಚ್‌. ವೀರಭದ್ರಪ್ಪ ಮಾತನಾಡಿದರು   

ದಾವಣಗೆರೆ: ಹಾಲುಮತದ ಎಚ್‌.ಬಿ. ಮಂಜಪ್ಪ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಶಾಪ ವಿಮೋಚನೆಯಾಗಲಿದೆ. ಕ್ಷೇತ್ರಕ್ಕೆ ಹಿಡಿದಿರುವ ಬಿಜೆಪಿ ಎಂಬ ಕ್ಯಾನ್ಸರ್‌ ಕೊನೆಗೊಳ್ಳಲಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್‌ ಹೇಳಿದರು.

ಕಾಂಗ್ರೆಸ್‌ ಭವನದಲ್ಲಿ ಶುಕ್ರವಾರ ನಡೆದ ಪಕ್ಷದ ಎಸ್‌ಸಿ ಘಟಕದ ಸಭೆಯಲ್ಲಿ ಅವರು ಮಾತನಾಡಿದರು.

ಮೋದಿ ಮಾತ್ರ ಸುಳ್ಳು ಹೇಳುತ್ತಾರೆ ಎಂದು ತಿಳಿದುಕೊಂಡಿದ್ದೆವು. ಇಲ್ಲಿನ ಸಂಸದ ಸಿದ್ದೇಶ್ವರ ಕೂಡ ಸುಳ್ಳು ಹೇಳುತ್ತಾ ತಿರುಗುತ್ತಿದ್ದಾರೆ. ರಾಷ್ಟ್ರೀಯು ಹೆದ್ದಾರಿಗೆ ₹ 5 ಸಾವಿರ ಕೋಟಿ ಅನುದಾನ ಬಂದಿದೆ. ₹ 1000 ಕೋಟಿ ವೆಚ್ಚದಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿ ನಡೆಯುತ್ತಿದೆ ಎಂದೆಲ್ಲ ಕರಪತ್ರ ಹಂಚುತ್ತಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಒಬ್ಬ ಸಂಸದನಿಗೆ ವರ್ಷಕ್ಕೆ ₹ 5 ಕೋಟಿ ಅನುದಾನ ಬರುತ್ತದೆ. ಅದು ಯಾರು ಸಂಸದರಾದರೂ ಬರುತ್ತದೆ. ಅದನ್ನು ಹೊರತುಪಡಿಸಿ, ಅವರ ಪ್ರಯತ್ನದಿಂದ ಕ್ಷೇತ್ರಕ್ಕೆ ಅನುದಾನ ತಂದಿರುವುದನ್ನು ತಿಳಿಸಲಿ. ₹ 10 ಸಾವಿರ ಕೋಟಿ ತಂದಿದ್ದೇನೆ ಎಂದು ಹೇಳುವ ಅವರು ಅದರ ಲೆಕ್ಕ ಕೊಡಲಿ ಎಂದು ಒತ್ತಾಯಿಸಿದರು.

ಕ್ಷೇತ್ರದಲ್ಲಿ 4 ಲಕ್ಷ ದಲಿತರು, 2.5 ಲಕ್ಷ ಮುಸ್ಲಿಮರು ಇದ್ದಾರೆ. ಇವರಲ್ಲದೇ ಹಿಂದುಳಿದ ವರ್ಗ, ಬ್ರಾಹ್ಮಣರು, ಲಿಂಗಾಯತರು ಸೇರಿದಂತೆ ಎಲ್ಲರೂ ಕಾಂಗ್ರೆಸ್‌ ಬೆಂಬಿಸುತ್ತಿದ್ದಾರೆ. ಹಾಗಾಗಿ ಮಂಜಪ್ಪ ಅವರ ಗೆಲುವು ಖಚಿತ ಎಂದು ಹೇಳಿದರು.

ಹಿಂದೂಗಳು, ಅಲ್ಪಸಂಖ್ಯಾತರು, ದಲಿತರು ಎಲ್ಲರೂ ಬೆಂಬಲಿಸುವ ಪಕ್ಷ ಕಾಂಗ್ರೆಸ್‌. ಇಲ್ಲಿರುವುದು ಆರ್‌ಎಸ್‌ಎಸ್‌ ಭಯೋತ್ಪಾದನೆ. ಗಾಂಧಿಯನ್ನು ಕೊಂದ ಕೃತ್ಯ ದೇಶದ ಮೊದಲ ಭಯೋತ್ಪಾದಕ ಕೃತ್ಯ ಎಂದು ತಿಳಿಸಿದರು.

ವೀಕ್ಷಕ ಟಿ. ಮಲ್ಲೇಶಪ್ಪ, ‘ಬಿಜೆಪಿ ಸರ್ಕಾರ ಬಂದರೆ ಅಂಬೇಡ್ಕರ್‌ ರಚಿಸಿದ ಸಂವಿಧಾನಕ್ಕೆ ಹೇಗೆ ಕುತ್ತು ಬರುತ್ತದೆ ಎಂಬುದನ್ನು ಕಾರ್ಯಕರ್ತರು ಮತದಾರರಿಗೆ ತಿಳಿಸಬೇಕು. ಅಟ್ರಾಸಿಟಿ, ವಿದ್ಯಾರ್ಥಿವೇತನಗಳಿಗೆಲ್ಲ ಕುತ್ತುಬರಲಿದೆ ಎಂಬುದನ್ನು ತಿಳಿಸಬೇಕು. ಪ್ರತಿ ಬೂತ್‌ಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಹೆಚ್ಚು ಮತ ಬೀಳುವಂತೆ ಮಾಡಬೇಕು. ಜೆಡಿಎಸ್‌ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು’ ಎಂದು ತಿಳಿಸಿದರು.

ಎಸ್‌ಸಿ ಘಟಕದ ಅಧ್ಯಕ್ಷ ಬಿ.ಎಚ್‌. ವೀರಭದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್‌ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ದಿನೇಶ್‌ ಶೆಟ್ಟಿ, ಎ.ನಾಗರಾಜ್‌, ನಾಯಕರಾದ ಟಿ. ಬಸವರಾಜ್‌, ಎಸ್‌. ಮಲ್ಲಿಕಾರ್ಜುನ, ಎನ್‌.ರಂಗಸ್ವಾಮಿ, ತಮ್ಮಣ್ಣ, ಹನುಮಂತಪ್ಪ, ಇಟ್ಟಿಗುಡಿ ಮಂಜುನಾಥ್‌, ಭಾಗ್ಯ ಹರಿಹರ, ಮರಿಯಪ್ಪ ಪೂಜಾರಿ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.