ತಿರುವನಂತಪುರ(ಕೇರಳ):‘ವಸ್ತ್ರ ತೆಗೆದು ಹಾಕಿದರೆ’ ಮುಸ್ಲಿಮರನ್ನು ಗುರುತಿಸಬಹುದು ಎಂದು ಕೇರಳ ಬಿಜೆಪಿ ಮುಖ್ಯಸ್ಥ ಪಿ.ಎಸ್.ಶ್ರೀಧರನ್ ಪಿಳ್ಳೈ ಹೇಳಿಕೆ ನೀಡಿದ್ದಾರೆ.
ಭಾನುವಾರ ಆತಿಂಟಾಲ್ನಲ್ಲಿ ನಡೆದ ಅಭಿಯಾನ ರ್ಯಾಲಿಯಲ್ಲಿ ಶ್ರೀಧರನ್ ಪಿಳ್ಳೈ ಅವರು ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಬಾಲಾಕೋಟ್ನಲ್ಲಿ ಭಾರತೀಯ ವಾಯುಪಡೆ ನಡೆಸಿದ ದಾಳಿಯ ಬಗ್ಗೆಯೂ ಪ್ರಸ್ತಾಪಿಸಿದ ಶ್ರೀಧರನ್ ಪಿಳ್ಳೈ, ‘ರಾಹುಲ್ ಗಾಂಧಿ, ಸೀತಾರಾಂ ಯಚೂರಿ ಮತ್ತು ಪಿಣರಾಯಿ ವಿಜಯನ್ ಅವರು ಯೋಧರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡುತ್ತಾರೆ. ಅಲ್ಲಿಯೂ ಜಾತಿ, ಧರ್ಮ ಇತ್ಯಾದಿಗಳನ್ನು ಹುಡುಕಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ‘ಒಂದೊಮ್ಮೆ ಇಸ್ಲಾಂ ಧರ್ಮದವರಾಗಿದ್ದರೆ ಕೆಲವು ಗುರುತುಗಳ ಮೂಲಕ ಅವರ ಧರ್ಮ ತಿಳಿಯಬಹುದು. ಅವರ ಬಟ್ಟೆ ತೆಗೆದರೆ ಗುರುತಿಸುವುದು ಸುಲಭ’ ಎಂದು ಹೇಳಿದ್ದಾರೆ.
ಪ್ರತಿಪಕ್ಷಗಳ ಕಾರ್ಯಕ್ಕೆ ಪ್ರತಿಯಾಗಿ ನಾವು ತಿರುಗೇಟು ನೀಡಲೇಬೇಕು ಎಂದಿರುವ ಕಾಂಗ್ರೆಸ್, ಪಿಳ್ಳೈ ಅವರ ಹೇಳಿಕೆ ಮುಸ್ಲಿಂ ಸಮಾಜಕ್ಕೆ ಮಾಡಿರುವ ಅಪಮಾನ ಎಂದು ಹೇಳಿದೆ. ಜತೆಗೆ, ಪಿಳ್ಳೈ ಅವರು ಮುಸ್ಲಿಂ ಸಮಾಜದ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದೆ. ಚುನಾವಣೆ ನೀತಿ ಸಂಹಿತಿ ಉಲ್ಲಂಘಿಸಿರುವ ಬಗ್ಗೆ ಆಯೋಗ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯನ್ನೂ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.