ADVERTISEMENT

ಸಂಗಣ್ಣ ನಾಮಪತ್ರ ಸಲ್ಲಿಕೆ ಮೆರಣಿಗೆಗೆ ಮೆರುಗು ನೀಡಿದ ಕಲಾತಂಡ: ಶ್ರೀರಾಮುಲು ಸಾಥ್

ಬಿಜೆಪಿ ಅಭ್ಯರ್ಥಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2019, 13:21 IST
Last Updated 3 ಏಪ್ರಿಲ್ 2019, 13:21 IST
ಕೊಪ್ಪಳದಲ್ಲಿ ಬುಧವಾರ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ನಗರದ ಪ್ರಮುಖ ಬೀದಿಗಳಲ್ಲಿ ಸಾವಿರಾರು ಬೆಂಬಲಿಗರ ಮಧ್ಯೆ ಬೃಹತ್ ಮೆರವಣಿಗೆ ನಡೆಸಿ, ನಾಮಪತ್ರ ಸಲ್ಲಿಸಲು ತೆರಳಿದರು
ಕೊಪ್ಪಳದಲ್ಲಿ ಬುಧವಾರ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ನಗರದ ಪ್ರಮುಖ ಬೀದಿಗಳಲ್ಲಿ ಸಾವಿರಾರು ಬೆಂಬಲಿಗರ ಮಧ್ಯೆ ಬೃಹತ್ ಮೆರವಣಿಗೆ ನಡೆಸಿ, ನಾಮಪತ್ರ ಸಲ್ಲಿಸಲು ತೆರಳಿದರು   

ಕೊಪ್ಪಳ: ಲೋಕಸಭೆಗೆಬಿಜೆಪಿ ಅಭ್ಯರ್ಥಿ‌ಯಾಗಿ ಬುಧವಾರ ಸಂಗಣ್ಣ ಕರಡಿ ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರಿಗೆ ನಾಮಪತ್ರ ಸಲ್ಲಿಸಿದರು.

ಬಳಿಕ ಗವಿಮಠದ ಗವಿಸಿದ್ಧೇಶ್ವರ ಕರ್ತು ಗದ್ದುಗೆಗೆದರ್ಶನ ಪಡೆದು, ಮೆರವಣಿಗೆಗೆ ಚಾಲನೆ ನೀಡಲಾಯಿತು. ಬಳಿಕ ಆರಂಭವಾದ ಮೆರವಣಿಗೆ ಗಡಿಯಾರ ಕಂಬ, ಅಶೋಕ ವೃತ್ತ ಮತ್ತು ಬಸವೇಶ್ವರ ವೃತ್ತದ ಮಾರ್ಗವಾಗಿ ಜಿಲ್ಲಾಡಳಿತ ಭವನ ತಲುಪಿತು.ಮೆರವಣಿಗೆಯಲ್ಲಿ ಡೊಳ್ಳು ಮತ್ತು ಅನೇಕ ವಾದ್ಯಗಳ ನಾದ ಮೆರವಣಿಗೆಯ ರಂಗನ್ನು ಹೆಚ್ಚಿಸಿತು. ಅಲ್ಲದೇ ಮಜಲು ಗೊಂಬೆಗಳು ನೋಡುಗರ ಗಮನ ಸೆಳೆದವು.

ಬಿಜೆಪಿ ಧ್ವಜ, ‌ಟೋಪಿ ಹಾಗೂ ನರೇಂದ್ರ ಮೋದಿ ಅವರ ಮುಖವಾಡ ಧರಿಸಿ ಕಾರ್ಯಕರ್ತರು ಗಮನ ಸೆಳೆದರು.ಮತ್ತೊಮ್ಮೆ ಮೋದಿ, ಕೊಪ್ಪಳಕ್ಕೆ ಸಂಗಣ್ಣ, ದೇಶಕ್ಕೆ ಮೋದಿ, ಅಬ್ ಕೀ ಬಾರ್ ಮೋದಿ ಸರ್ಕಾರ್ ಎಂಬ ಘೋಷಣೆಗಳು ಮುಗಿಲು ಮುಟ್ಟಿದವು.

ADVERTISEMENT

ಸುತ್ತಮುತ್ತಲಿನ ಭಾಗ್ಯನಗರ, ಗಂಗಾವತಿ, ಯಲಬುರ್ಗಾ, ಕುಷ್ಟಗಿ, ಸಿಂಧನೂರ, ಮಸ್ಕಿ, ಶಿರಗುಪ್ಪಾ ಸೇರಿದಂತೆ ವಿವಿಧ ಕಡೆಗಳಿಂದ ಮಿನಿ ಬಸ್, ಟ್ರ್ಯಾಕ್ಟರ್, ಟಂ ಟಂ, ಕಾರು, ಲಾರಿಗಳ ಮೂಲಕಸಾವಿರಾರು ಯುವಕರು, ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದ್ದರು.

ತೆರೆದ ವಾಹನದ ಮೇಲೆ ಅಭ್ಯರ್ಥಿ ಸಂಗಣ್ಣ ಕರಡಿ, ಲೋಕಸಭಾ ಕ್ಷೇತ್ರದ ಉಸ್ತುವಾರಿ ಬಿ.ಶ್ರೀರಾಮುಲು, ಮಾಜಿ ಸಚಿವ ಲಕ್ಷ್ಮಣ ಸವದಿ, ಶಾಸಕ ಮುರುಗೇಶ ನಿರಾಣಿ, ಪರಣ್ಣ ಮುನವಳ್ಳಿ, ಬಸವರಾಜ ದಡೇಸ್ಗೂರ, ಹಾಲಪ್ಪ ಆಚಾರ್, ಸೋಮಲಿಂಗಪ್ಪ, ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ, ಮಾಜಿ ಶಾಸಕ ಕೆ.ಶರಣಪ್ಪ,ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ, ಹೇಮಲತಾ ನಾಯಕ, ವಕೀಲ ವಿ.ಎಂ.ಭೂಸನೂರಮಠ, ಚಂದ್ರಶೇಖರ ಕವಲೂರು, ಮಧುರಾ ಕರಣಂ, ಶೋಭಾ ನಗರಿ ಇದ್ದರು.

ಬಿಸಿಲಿನ ತಾಪ: ಬೆಳಿಗ್ಗೆ 11ಕ್ಕೆ ಮೆರವಣಿಗೆ ಗವಿಮಠದ ಎದುರಿನ ಬಯಲಿನಿಂದ ಆರಂಭಗೊಂಡಿತು. ವಿವಿಧ ಭಾಗದಿಂದ ಬಂದಿದ್ದ ಕಾರ್ಯಕರ್ತರು ಬಿಸಿಲಿನ ತಾಪಕ್ಕೆ ಹೆದರಿ ನೆರಳಿನ ಆಶ್ರಯ ಪಡೆದರು. ಮಧ್ಯಾಹ್ನ 3 ಗಂಟೆವರೆಗೆ ಮೆರವಣಿಗೆ ನಡೆಯಿತು. ರಸ್ತೆಯ ಇಕ್ಕೆಲಗಳಲ್ಲಿ ತಂಪು ಪಾನೀಯಕ್ಕೆ ಜನ ಮುಗಿಬಿದ್ದರು. ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.