ADVERTISEMENT

‘ಚೌಕಿದಾರ್’ ಅಭಿಯಾನ: ನೈರುತ್ಯ ರೈಲ್ವೆ ಸಿಬ್ಬಂದಿಗೆ ಶಿಸ್ತು ಕ್ರಮದ ಎಚ್ಚರಿಕೆ

ಅಭಿಯಾನಕ್ಕೆ ಬೆಂಬಲ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 12:45 IST
Last Updated 2 ಏಪ್ರಿಲ್ 2019, 12:45 IST
ನೈರುತ್ಯ ರೈಲ್ವೆ ಹುಬ್ಬಳ್ಳಿ ವರ್ಕ್‌ಶಾಪ್ ಸಿಬ್ಬಂದಿ ರವಿ ಹುಣಸಗಿ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ‘ಚೌಕಿದಾರ್ ರವಿ ಹುಣಸಗಿ’ ಎಂದು ಬರೆದುಕೊಂಡಿರುವುದು
ನೈರುತ್ಯ ರೈಲ್ವೆ ಹುಬ್ಬಳ್ಳಿ ವರ್ಕ್‌ಶಾಪ್ ಸಿಬ್ಬಂದಿ ರವಿ ಹುಣಸಗಿ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ‘ಚೌಕಿದಾರ್ ರವಿ ಹುಣಸಗಿ’ ಎಂದು ಬರೆದುಕೊಂಡಿರುವುದು   

ಹುಬ್ಬಳ್ಳಿ: ‘ಮೈ ಬಿ ಚೌಕಿದಾರ್’ ಅಭಿಯಾನ ಬೆಂಬಲಿಸಿ ನೈರುತ್ಯ ರೈಲ್ವೆ ಆರ್‌ಪಿಎಫ್ ಸಿಬ್ಬಂದಿ ರವಿ ಬೈಲಕ್ಕನವರ ಹಾಗೂ ಹುಬ್ಬಳ್ಳಿ ವರ್ಕ್‌ಶಾಪ್ ಸಿಬ್ಬಂದಿ ರವಿ ಹುಣಸಗಿ ಎಂಬುವರ ಪ್ರೊಫೈಲ್‌ನಲ್ಲಿ ತಮ್ಮ ಹೆಸರಿನ ಜೊತೆ ‘ಚೌಕಿದಾರ್’ ಎಂದು ಬರೆದುಕೊಂಡಿದ್ದಾರೆ.

‘ಈ ರೀತಿ ಅಶಿಸ್ತಿನ ವರ್ತನೆ ತೋರುವ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಈ ರೀತಿ ಪೋಸ್ಟ್‌ಗಳನ್ನು ಹಾಕಬಾರದು ಎಂದು ಸಿಬ್ಬಂದಿಗೆ ಜಾಗೃತಿ ಸಹ ಮೂಡಿಸಲಾಗಿದೆ’ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಇ. ವಿಜಯಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಎಚ್ಚರಿಕೆ ನೀಡಿದ ನಂತರ ರವಿ ಬೈಲಕ್ಕನವರ್ ಅವರು ‘ಚೌಕಿದಾರ್’ ಎಂಬ ಪದವನ್ನು ತೆಗೆದು ಹಾಕಿದ್ದಾರೆ.

ADVERTISEMENT

ಪ್ರೊಫೈಲ್‌ನಲ್ಲಿ ‘ಮೈ ಬಿ ಚೌಕಿದಾರ್’ ಎಂದು ಬರೆದುಕೊಂಡಿದ್ದ ಆರ್‌ಪಿಎಫ್ ಎಎಸ್‌ಐ ಲಕ್ಷ್ಮಣ್ ಅವರಿಗೆ ಜಿಲ್ಲಾ ಚುನಾವಣಾಧಿಕಾರಿ ಕೆಲ ದಿನಗಳ ಹಿಂದೆ ನೋಟಿಸ್ ಜಾರಿ ಮಾಡಿದ್ದರು.

‘ನಾನು ಈ ದೇಶದ ಪ್ರಧಾನಿ ಅಲ್ಲ ಚೌಕಿದಾರ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರವಾಗಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್ ‘ಚೌಕಿದಾರ್ ಚೋರ್‌ ಹೈ’ (ಕಾವಲುಗಾರನೇ ಕಳ್ಳ) ಎಂದು ಅಭಿಯಾನ ಆರಂಭಿಸಿದೆ. ಇದಕ್ಕೆ ಪ್ರತಿಯಾಗಿ ಮೋದಿ ಅವರು ಟ್ವಿಟ್ಟರ್ ಖಾತೆಯ ತಮ್ಮ ಹೆಸರಿನ ಮುಂದೆ ಚೌಕಿದಾರ್ ಎಂದು ಸೇರಿಸಿದ್ದರು. ಆ ನಂತರ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸಹ ತಮ್ಮ ಹೆಸರಿನ ಮುಂದೆ ಚೌಕಿದಾರ್ ಎಂದು ಸೇರಿಸಿಕೊಂಡು ಅಭಿಯಾನ ಆರಂಭಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.