ADVERTISEMENT

ವ್ಯವಸ್ಥೆ ಬದಲಾವಣೆಗೆ ಜನ ಮುಂದಾಗಬೇಕು: ಉಪೇಂದ್ರ ಸಲಹೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 14:23 IST
Last Updated 5 ಏಪ್ರಿಲ್ 2019, 14:23 IST

ಕೋಲಾರ: ‘ಜಾತಿ, ಧರ್ಮ, ಹಣದ ಆಧಾರದ ಮೇರೆಗೆ ಎಷ್ಟು ದಿನ ಚುನಾವಣೆಗಳಲ್ಲಿ ಸ್ಪರ್ಧಿಸಲು ಸಾಧ್ಯ. ಹಣ ಇರುವವರೇ ಗೆಲ್ಲಬೇಕು ಎನ್ನುವ ವ್ಯವಸ್ಥೆ ಬದಲಾವಣೆ ಜನರ ಕೈಯಲ್ಲಿದ್ದು ವ್ಯವಸ್ಥೆ ಬದಲಾವಣೆಗೆ ಮುಂದಾಗಬೇಕು’ ಎಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಸಲಹೆ ನೀಡಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಂವಿಧಾನದ ಆಶಯದಂತೆಯೇ ವ್ಯವಸ್ಥೆ ಬದಲಾಗಬೇಕಿದ್ದು, ಅದಕ್ಕಾಗಿಯೇ ಹಣ, ತೋಳ್ಬಲ ನೋಡದೆ ಸಾಮಾನ್ಯ ಜನರಿಂದಲೇ ನಮ್ಮ ಪಕ್ಷಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದು ಹೇಳಿದರು.

‘ಹಣ, ತೋಳ್ಬಲ ಇಲ್ಲದ ನಮ್ಮ ಪರವಾಗಿ ಯುವಕರು ಇದ್ದಾರೆ. ನಮ್ಮ ಉದ್ದೇಶಗಳನ್ನು ಜನತೆಗೆ ಮುಟ್ಟಿಸುತ್ತಿದ್ದಾರೆ. ನಮ್ಮ ಕೆಲಸ ನಮ್ಮದು, ಹಣ ಇರುವ ಅಭ್ಯರ್ಥಿಗಳ ಕೆಲಸ ಅವರದ್ದು, ಒಟ್ಟಾರೆ ಎಲ್ಲ ಚುನಾವಣೆಗಳಲ್ಲಿಯೂ ಪ್ರಜಾಕೀಯದಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು’ ಎಂದರು.

ADVERTISEMENT

‘ವ್ಯವಸ್ಥೆ ಎಲ್ಲವೂ ಸರಿಯಿಲ್ಲ ಎನ್ನುವುದು ಜನರ ಬಾಯಲ್ಲಿ ಹರಿದಾಡುತ್ತಿದೆ. ಹೀಗಿರುವಾಗಿ ಬದಲಾವಣೆಯೂ ಅವರಿಂದಲೇ ಆಗಬೇಕಿದೆ. ಅದಕ್ಕಾಗಿಯೇ ಜನ ಸಂಪರ್ಕದಲ್ಲಿರುವವರನ್ನೇ ಸದ್ಯ 14 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದ್ದು, ಮುಂದಿನ ಹಂತದಲ್ಲಿ 14 ಮಂದಿ ಸ್ಪರ್ಧೆಗೆ ಅವಕಾಶ ಕಲ್ಪಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಅಭ್ಯರ್ಥಿಗಳು ಚುನಾವಣೆ ಸಮಯದಲ್ಲೇ ಸೇವೆಗೆ ಬರಬೇಕು. ಉಳಿದ ಸಮಯದಲ್ಲಿ ಬೇರೆ ಕೆಲಸಗಳನ್ನು ಮಾಡಬೇಕು, ನಾವು ಸಹ ಎಲ್ಲ ವಿವರಗಳನ್ನು ಪರಿಶೀಲಿಸಿದ ಬಳಿಕವೇ ಅಭ್ಯರ್ಥಿ ರಾಮಾಂಜಿ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರತಿತಿಂಗಳೂ ಪ್ರಕ್ರಿಯೆಗಳ ಕುರಿತು ಇವರಿಂದ ವರದಿ ಪಡೆದುಕೊಳ್ಳುತ್ತೇವೆ. ಒಂದು ವೇಳೆ ತಪ್ಪು ಕಂಡು ಬಂದರೆ ಪಕ್ಷದಿಂದ ಉಚ್ಚಾಟನೆ ಮಾಡುತ್ತೇವೆ’ ಎಂದು ಹೇಳಿದರು.

ಮಂಡ್ಯ ಕ್ಷೇತ್ರದಲ್ಲಿ ನಟಿ ಸುಮಲತಾ ಅವರಿಗೆ ಬೆಂಬಲ ನೀಡುವ ಕುರಿತು ಪ್ರತಿಕ್ರಿಯಿಸಿದ ಉಪೇಂದ್ರ, ‘ವೃತ್ತಿ ಬೇರೆ. ರಾಜಕೀಯ ಬೇರೆ. ನಮ್ಮ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಬೇರೆಯವರಿಗೆ ಬೆಂಬಲ ನೀಡಿದರೆ ಜನ ಒಪ್ಪುವುದಿಲ್ಲ’ ಎಂದರು.

ಪಕ್ಷದ ಅಭ್ಯರ್ಥಿ ರಾಮಾಂಜಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.