ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕಣಕ್ಕಿಳಿದ ಕಾರಣ ಬೆಳಗಾವಿ ಲೋಕಸಭಾ ಕ್ಷೇತ್ರ ಗಮನ ಸೆಳೆದಿದೆ. ಈ ಹಿರಿಯ ರಾಜಕಾರಣಿ ಎದುರು ಯುವ ನಾಯಕ, ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ಪುತ್ರ ಮೃಣಾಲ್ ಸ್ಪರ್ಧೆ ಒಡ್ಡಿದ್ದಾರೆ. ನೇರ ಹಣಾಹಣಿ ನಡೆದಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.
ಬೆಳಗಾವಿ ಕ್ಷೇತ್ರವನ್ನು ಬಿಜೆಪಿಯ ‘ಭದ್ರಕೋಟೆ’ ಮಾಡಿದವರು ಸುರೇಶ ಅಂಗಡಿ. ಸತತ ನಾಲ್ಕು ಸಲ ಗೆದ್ದ ಅವರು ಒಮ್ಮೆ ಕೇಂದ್ರ ರೈಲ್ವೆ ರಾಜ್ಯ ಸಚಿವರಾಗಿದ್ದರು. ಅಕಾಲಿಕ ನಿಧನರಾದ ಬಳಿಕ ಅವರ ಪತ್ನಿ ಮಂಗಲಾ 2021ರ ಉಪ ಚುನಾವಣೆಯಲ್ಲಿ ಗೆದ್ದರು. ಹೀಗೆ ಬಿಜೆಪಿ ಇಲ್ಲಿ ಸತತ ಐದು ಬಾರಿ ಗೆದ್ದಿದೆ.
ಶೆಟ್ಟರ್ ಅವರು ಅಂಗಡಿ ಕುಟುಂಬದ ಬೀಗರು. ಹೀಗಾಗಿ, ಸಂಸದೆ ಮಂಗಲಾ ಯಾವುದೇ ತಕರಾರಿಲ್ಲದೇ ಕ್ಷೇತ್ರ ಬಿಟ್ಟುಕೊಟ್ಟರು. ಸುರೇಶ ಅಂಗಡಿ ಸಾಧನೆ, ಬಿಜೆಪಿಯ ಮತ ಬ್ಯಾಂಕ್, ಪ್ರಧಾನಿ ಮೋದಿ ಮೇನಿಯಾ, ರಾಮ ಮಂದಿರ... ಹೀಗೆ ಹಲವು ಬಾಣಗಳು ಶೆಟ್ಟರ್ ಬತ್ತಳಿಕೆಯಲ್ಲಿವೆ. ಎರಡು ಅವಧಿಗೆ ಅವರು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದನ್ನು ನೆನೆಪಿಸಿಕೊಂಡು ಪ್ರಚಾರ ನಡೆಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯಾಗಿ ಲಕ್ಷ್ಮಿ ಹೆಬ್ಬಾಳಕರ ಮಾಡಿದ ಸಾಧನೆ, ಪಂಚ ಗ್ಯಾರಂಟಿಗಳು, ಒಗ್ಗಟ್ಟಾಗಿ ನಿಂತ ಕಾಂಗ್ರೆಸ್ ನಾಯಕರು ಮೃಣಾಲ್ ಬಲ ಹೆಚ್ಚಿಸಿದ್ದಾರೆ. ಪಂಚಮಸಾಲಿ ಮತ್ತು ಅಹಿಂದ ಮತಗಳನ್ನು ಅವರು ನೆಚ್ಚಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.