ಬೆಂಗಳೂರು: ‘ಸತ್ಯ, ನ್ಯಾಯ, ನೀತಿ, ಧರ್ಮದಿಂದ ನಡೆದುಕೊಳ್ಳುತ್ತೇನೆ. ಭ್ರಷ್ಟಾಚಾರದಲ್ಲಿ ಪಾಲ್ಗೊಳ್ಳುವುದಿಲ್ಲ....’
ಇದು ಕೆಆರ್ಎಸ್ ಅಭ್ಯರ್ಥಿಗಳ ಪ್ರತಿಜ್ಞಾ ವಿಧಿ. ಭ್ರಷ್ಟಾಚಾರವೇ ಈ ಬಾರಿಯ ಚುನಾವಣೆಯ ಪ್ರಮುಖ ವಿಷಯವಾಗಿರುವಾಗ ಕೆಆರ್ಎಸ್ ಪಕ್ಷದ ಈ ನಡೆ ಗಮನಸೆಳೆದಿದೆ.
‘ರಾಜ್ಯದ ಜನತೆಯ ಹಿತಕ್ಕಾಗಿ ಕಾಯಾ– ವಾಚಾ– ಮನಸಾ ಕೆಲಸ ಮಾಡುತ್ತೇನೆ’ ಎಂದು ಸಾರ್ವಜನಿಕವಾಗಿ ವಾಗ್ದಾನ ನೀಡಿ, ಕಡ್ಡಾಯವಾಗಿ ಪ್ರತಿಜ್ಞೆ ಮಾಡುವ ಅಭ್ಯರ್ಥಿಗಳಿಗೆ ಮಾತ್ರ ಪಕ್ಷದ ‘ಬಿ ಫಾರಂ’ ನೀಡಲಾಗುತ್ತಿದೆ.
47 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕೆಆರ್ಎಸ್ ಪ್ರಕಟಿಸಿದೆ. ಶುಕ್ರವಾರ ಮೈಸೂರಿನಲ್ಲಿ ಮೂವರಿಗೆ ಬಿ ಫಾರಂ ನೀಡಲಾಗಿದೆ. ಬೆಂಗಳೂರಿನಲ್ಲಿ ಶನಿವಾರ ನಡೆದ ಪಕ್ಷದ ಸಭೆಯಲ್ಲಿ ಪ್ರತಿಜ್ಞಾ ವಿಧಿ ಪೂರೈಸಿದ 37 ಅಭ್ಯರ್ಥಿಗಳಿಗೆ ಬಿ. ಫಾರಂ ನೀಡಲಾಯಿತು.
‘ಮತದಾರರಿಗೆ ಆಮಿಷವೊಡ್ಡುವ ಕಾನೂನುಬಾಹಿರ ಚಟುವಟಿಕೆಗಳನ್ನು ಕೈಗೊಳ್ಳುವುದಿಲ್ಲ. ಜನಪ್ರತಿನಿಧಿಯಾಗಿ ಆಯ್ಕೆಯಾದರೆ ದೊರೆಯುವ ಸಂಬಳ ಅಥವಾ ಗೌರವಧನದಲ್ಲಿ ಮೂರನೇ ಒಂದು ಭಾಗವನ್ನು ಪಕ್ಷಕ್ಕೆ ದೇಣಿಗೆ ನೀಡುತ್ತೇನೆ ಮತ್ತು ಕಾನೂನುಬಾಹಿರ ಖಾಸಗಿ ವ್ಯವಹಾರಗಳನ್ನು ಮಾಡುವುದಿಲ್ಲ. ಜನ ಹಿತಕ್ಕಾಗಿ ದುಡಿಯುತ್ತೇನೆ ಮತ್ತು ಅಧಿಕಾರ ದುರುಪಯೋಗಪಡಿಸಿಕೊಳ್ಳುವುದಿಲ್ಲ. ಯಾವುದೇ ರೀತಿಯ ಜನದ್ರೋಹಿ ಅಥವಾ ಪಕ್ಷದ್ರೋಹಿ ಕೆಲಸ ಮಾಡುವುದಿಲ್ಲ’ ಎಂದು ಅಭ್ಯರ್ಥಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
‘ಭಷ್ಟರೇ ಪವಿತ್ರವಾದ ರಾಜಕಾರಣವನ್ನು ಬಿಟ್ಟು ತೊಲಗಿ, ನಾಡಪ್ರೇಮಿಗಳೇ ಪ್ರಾಮಾಣಿಕ ರಾಜಕಾರಣಕ್ಕೆ ಮುಂದಾಗಿ’ ಎನ್ನುವ ಜಾಗೃತಿ ಅಭಿಯಾನವನ್ನು ರಾಜ್ಯ ಘಟಕದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.