ADVERTISEMENT

‘ಕಾಂಗ್ರೆಸ್‌ಗೆ ಅಹಿಂದ ವರ್ಗದ ಬೆಂಬಲ’

​ಪ್ರಜಾವಾಣಿ ವಾರ್ತೆ
Published 8 ಮೇ 2018, 19:48 IST
Last Updated 8 ಮೇ 2018, 19:48 IST

ಬಾಚೇನಹಟ್ಟಿ(ಮಾಗಡಿ): ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ.ಬಾಲಕೃಷ್ಣ ಅವರ ಗೆಲುವಿಗೆ ಅಹಿಂದ ವರ್ಗ ಬೆಂಬಲ ಸೂಚಿಸಿದೆ ಎಂದು ಯಾದವ ಸಮಾಜದ ಮುಖಂಡ ಅಡಕಮಾರನಹಳ್ಳಿ ಪ್ರಕಾಶ್ ತಿಳಿಸಿದರು.

ಬಾಚೇನಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಮಸ್ಕಲ್, ಚಿಕ್ಕಮಸ್ಕಲ್, ಗುಡ್ಡಯ್ಯನಪಾಳ್ಯ, ಅಡಕಮಾರನಹಳ್ಳಿ ಇತರೆಡೆಗಳಲ್ಲಿ ಮನೆಮನೆಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚಿಸಿ ಅವರು ಮಾತನಾಡಿದರು.

‘20 ವರ್ಷಗಳಿಂದ ಎಚ್.ಸಿ.ಬಾಲಕೃಷ್ಣ ಮುಂದುವರಿದ ಸಮುದಾಯಗಳಿಗೆ ಹೆಚ್ಚಿನ ಸಹಾಯ ನೀಡಿ ಬೆಂಬಲಿಸಿದ್ದಾರೆ. ಆದರೆ, ಈ ಬಾರಿ ಚುನಾವಣೆಯಲ್ಲಿ ಅಹಿಂದ ವರ್ಗದವರೇ ಬಾಲು ಅವರ ಪರವಾಗಿ ನಿಂತಿದ್ದೇವೆ. ಅಹಿಂದ ವರ್ಗದವರ ಮತಗಳೇ ಈ ಬಾರಿ ಚುನಾವಣೆಯಲ್ಲಿ ನಿರ್ಣಾಯಕವಾಗಿರುವುದರಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಲು ತೀರ್ಮಾನಿಸಿದ್ದೇವೆ’ ಎಂದು ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ ನಾಯ್ಕ ತಿಳಿಸಿದರು.

ADVERTISEMENT

ಯಾದವ ಯುವ ಸಂಘಟನೆಯ ಸಂಚಾಲಕ ಪುಟ್ಟರಾಜಯಾದವ್ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ.ಬಾಲಕೃಷ್ಣ ಭಾರಿ ಬಹುಮತದಿಂದ ಜಯ ಗಳಿಸಲಿದ್ದಾರೆ. ಜಯಶಾಲಿಯಾದ ನಂತರ ಅಹಿಂದ ವರ್ಗದವರನ್ನು ಮೇಲೆತ್ತುವ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.

ಗೊಲ್ಲರಪಾಳ್ಯದ ಬಲರಾಮಯ್ಯ ತಗಚಗುಪ್ಪೆ ಶಿವಕುಮಾರ್, ಬಾಚೇನಹಟ್ಟಿ ಚಂದ್ರಣ್ಣ, ಕಲ್ಲೂರಿನ ಬಾಳೇಗೌಡ, ರಂಗನಾಥ, ಚಿಕ್ಕರೇವಣ್ಣ, ಯೋಗೀಶ, ದೈತಪ್ಪ, ಅಡಕಮಾರನಹಳ್ಳಿ ನಾಗರಾಜು, ಕಾಂತರಾಜು, ಅಶ್ವತ್ಥಪ್ಪ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಮತ ಯಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.