ಜಮಖಂಡಿ: ಕಾಂಗ್ರೆಸಿಗರೇ, ನಿಮ್ಮ ಪೂರ್ವಜರಿಂದ ಏನಾದರೂ ಕಲಿಯುವುದು ಬೇಡ ಅಂದ್ರೆ ಬೇಡ! ಕನಿಷ್ಠ ನಮ್ಮ ಬಾಗಲಕೋಟೆಯ ಮುಧೋಳ ನಾಯಿಗಳಿಂದಲಾದರೂ ಏನಾದರೂ ಕಲಿತುಕೊಳ್ಳಿ, ಮುಧೋಳ ನಾಯಿಗಳಿಂದಲೂ ಪಾಠ ಕಲಿಯುತ್ತಾರೆ ಎನ್ನುವ ಭರವಸೆ ನನಗಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಪಕ್ಷವನ್ನು ಟೀಕಿಸಿದರು.
ಇಲ್ಲಿನ ಬಿಜೆಪಿ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದೇಶಕ್ಕಾಗಿ ತಮ್ಮ ಜೀವನವನ್ನು ಮುಡಿಪಿಟ್ಟರು ಇಲ್ಲಿನ ಬೇಡರು. ನಾವು ಹೇಗೆ ಬದುಕಬೇಕು ಎಂದು ಅವರು ಬದುಕಿ ತೋರಿಸಿದರು. ಹಲಗಲಿ ಬೇಡರು ನಮಗೆ ಮಾದರಿ ಎಂದರು.
ದೇಶಭಕ್ತಿಯ ಬಗ್ಗೆ ಚರ್ಚೆ ಶುರುವಾದಾಗ, ವಂದೇ ಮಾತರಂ ಬಗ್ಗೆ ಚರ್ಚೆ ಶುರುವಾದರೆ ಕೆಲವರಿಗೆ ಕಷ್ಟವೂ ಆಗುತ್ತೆ, ದೇಶಭಕ್ತಿಯಿಂದಲೇ ನಮಗೆ ಸ್ವತಂತ್ರ ಬಂತು. ಈಗ ಅದೇ ದೇಶಭಕ್ತಿಯಿಂದ ಅಭಿವೃದ್ಧಿ ಸಾಧಿಸಬೇಕು. ಕಾಂಗ್ರೆಸ್ಗೆ ದೇಶಭಕ್ತಿ ಅಂದ್ರೆ ಆಗಿಬರಲ್ಲ. ಎಂದು ತಿಳಿಸಿದರು.
ಈ ಭಾಗದ ರೈತರಿಗೆ ಕಾಯಕಲ್ಪ ಆಗಬೇಕಿದ್ದ ನೀರಾವರಿ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಬೇರೆಡೆಗೆ ಸ್ಥಳಾಂತರಿಸಿತ್ತು. ಯಡಿಯೂರಪ್ಪ ಕಾಲದಲ್ಲಿ ರೂಪಿಸಿದ್ದ ನೀರಾವರಿ ಯೋಜನೆಗೂ ಅವರು ಅಡ್ಡ ಹಾಕಿದ್ದರು. ಕಬ್ಬು ಬೆಳೆಗಾರರಿಗೆ ನೀರು ಕೊಡುವುದರಲ್ಲಿ ರಾಜಕೀಯ ಮಾಡಿದರು. ಬೆಳೆದ ಕಬ್ಬಿಗೆ ಸೂಕ್ತ ಬೆಲೆ ಕೊಡಿಸಲು ಇವರಿಗೆ ಆಗ್ತಿಲ್ಲ. ಸಿದ್ದರಾಮಯ್ಯ ಅವರಿಗೆ ಈ ಭಾಗದ ಕಬ್ಬು ಬೆಳೆಗಾರರ ಮೇಲೆ ಪೂರ್ವ ಜನ್ಮದ ದ್ವೇಷ ಇದ್ದಂತೆ ಇದೆ ಎಂದರು.
ಸಣ್ಣ ನೇಕಾರರಿಗೆ ಅನುಕೂಲ ಮಾಡಿಕೊಡಲು ಹಲವು ಯೋಜನೆ ಅರಂಭಿಸಿದ್ದೇವೆ. ಯಂತ್ರಗಳ ಖರೀದಿಗೆ ಸುಲಭದ ಸಾಲ ಸಿಗುತ್ತೆ. ಪ್ರತ್ಯೇಕ "ಮುದ್ರಾ" ಯೋಜನೆ ಆರಂಭಿಸಿದ್ದೇವೆ. ಇಳಕಲ್ ಸೀರೆ ವಿಶ್ವಖ್ಯಾತಿ ಪಡೆದಿದೆ. ದೇಶದೆಲ್ಲೆಡೆ ಜವಳಿ ಉದ್ದಿಮೆಯ ಪುನರುಜ್ಜೀವನಕ್ಕೆ ಸಾವಿರಾರು ಕೋಟಿ ರೂಪಾಯಿ ವೆಚ್ಚದ ಯೋಜನೆ ಜಾರಿ ಮಾಡುತ್ತಿದ್ದೇವೆ. ವಿಶ್ವವ್ಯಾಪಿ ಇಳಕಲ್ ಸೀರೆಗಳಿಗೆ ಮಾರುಕಟ್ಟೆ ಕಲ್ಪಿಸಲು ಆನ್ಲೈನ್ ಮಾರುಕಟ್ಟೆಗೂ ಅವಕಾಶ ಕಲ್ಪಿಸಿದ್ದೇವೆ.
ಯಡಿಯೂರಪ್ಪ ನೇತೃತ್ವದ ಸರ್ಕಾರ ನಿಜದ ಅರ್ಥದಲ್ಲಿ ರೈತಪರ ಸರ್ಕಾರ ಆಗಿರುತ್ತೆ. ಮುಖ್ಯಮಂತ್ರಿ ಕಚೇರಿಯಲ್ಲಿ ರೈತಬಂಧು ವಿಭಾಗ ಇರುತ್ತೆ. ಮುಖ್ಯಮಂತ್ರಿಗಳೇ ಅದರ ಉಸ್ತುವಾರಿ ನೋಡ್ತಾರೆ ಎಂದರು.
ಈ ಜಿಲ್ಲೆಯ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ. ಇತಿಹಾಸ ನಿರ್ಮಿಸಿ. ನಿಮಗೆ ಮೋಸ ಮಾಡಿದ ಮುಖ್ಯಮಂತ್ರಿಗೆ ತಕ್ಕ ಪಾಠ ಕಲಿಸಿ. ಅವಕಾಶ ಕಳೆದುಕೊಳ್ಳಬೇಡಿ ಎಂದು ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.