ನವದೆಹಲಿ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ಪಕ್ಷದ ಕರ್ನಾಟಕ ಎಟಿಎಂನ ಚೀಫ್ ಮ್ಯಾನೇಜರ್ (ಸಿ.ಎಂ) ಎಂದು ಬಿಜೆಪಿ ಸೋಮವಾರ ಲೇವಡಿ ಮಾಡಿದೆ.
ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕ ಎಟಿಎಂ ಆಗಿತ್ತು. ಅದಕ್ಕೀಗ ಕುಮಾರಸ್ವಾಮಿ ರೂಪದಲ್ಲಿ ಹೊಸ ಚೀಫ್ ಮ್ಯಾನೇಜರ್ ಸಿಕ್ಕಿದ್ದಾರೆ ಎಂದು ಬಿಜೆಪಿಯ ವಕ್ತಾರ ಸಂಬಿತ್ ಪಾತ್ರಾ ಟೀಕಿಸಿದ್ದಾರೆ.
‘ಕರ್ನಾಟಕದ ಆಡಳಿತ ನೇರವಾಗಿ ದೆಹಲಿಯ ಜನಪಥದಿಂದ (ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ನಿವಾಸ) ನಡೆಯಲಿದ್ದು, ರಾಜ್ಯದ ಜನರು ತಮ್ಮ ಮುಖ್ಯಮಂತ್ರಿ ಯಾರು ಎಂದು ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಅವರು ವ್ಯಂಗ್ಯವಾಡಿದ್ದಾರೆ.
ತಾನು ಕರ್ನಾಟಕ ಜನರ ಮುಲಾಜಿನಲ್ಲಿ ಇಲ್ಲ. ಕಾಂಗ್ರೆಸ್ ಮುಲಾಜಿನಲ್ಲಿ ಇದ್ದೇನೆ ಎನ್ನುವ ಮೂಲಕ ಕುಮಾರಸ್ವಾಮಿ ಅವರು ಗಾಂಧಿ ಕುಟುಂಬದ ಪಾದಕ್ಕೆ ಶರಣಾಗಿದ್ದಾರೆ ಎಂದು ಪಾತ್ರಾ ಟೀಕಿಸಿದ್ದಾರೆ.
ಈ ರೀತಿ ಹೇಳುವ ಮೂಲಕ ಕುಮಾರಸ್ವಾಮಿ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕ ಮಾಡಿದ್ದಾರೆ. ಇದಕ್ಕಿಂತ ದುಃಖಕರವಾದ ವಿಷಯ ಮತ್ತೊಂದಿಲ್ಲ ಎಂದರು.
ಕೇವಲ ರಾಜಕೀಯ ಸ್ವಾರ್ಥ ಸಾಧನೆಗಾಗಿ ಕಾಂಗ್ರೆಸ್–ಜೆಡಿಎಸ್ ಮೈತ್ರಿ ಸರ್ಕಾರ ಜನಾದೇಶವನ್ನು ಧಿಕ್ಕರಿಸಿ ಅಸ್ವಿತ್ವಕ್ಕೆ ಬಂದಿದೆ ಎಂದು ಪಾತ್ರಾ ಆರೋಪಿಸಿದ್ದಾರೆ.
ಬಿಜೆಪಿ ವಿರುದ್ಧ ಒಂದಾಗಿರುವ ಪ್ರಾದೇಶಿಕ ಪಕ್ಷಗಳ ಮುಖಂಡರು ರಾಹುಲ್ ಗಾಂಧಿ ಅವರನ್ನು ತಮ್ಮ ಮುಖಂಡನನ್ನಾಗಿ ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.