ADVERTISEMENT

ಜೂನ್‌ 11ರಂದು ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ

ಬಿಜೆಪಿ ಟಿಕೆಟ್‌ಗಾಗಿ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 18 ಮೇ 2018, 19:30 IST
Last Updated 18 ಮೇ 2018, 19:30 IST

ಬೆಂಗಳೂರು: ಬಿಜೆಪಿ ಅಭ್ಯರ್ಥಿ ವಿಜಯ ಕುಮಾರ್‌ ಅವರ ನಿಧನದಿಂದ ಮುಂದೂಡಿದ್ದ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಘೋಷಣೆಯಾಗಿದ್ದು, ಜೂನ್‌ 11ರಂದು ಸೋಮವಾರ ಮತದಾನ ನಡೆಯಲಿದೆ. ಜೂನ್‌ 13ರಂದು ಬುಧವಾರ ಫಲಿತಾಂಶ ಪ್ರಕಟವಾಗಲಿದೆ.

2008ರಿಂದ ಎರಡು ಅವಧಿಗೆ ಜಯನಗರ ಕ್ಷೇತ್ರವನ್ನು ಪ್ರತಿನಿಧಿಸಿದ್ದ ವಿಜಯ ಕುಮಾರ್‌ ಮೇ 4ರಂದು ನಿಧನರಾದ್ದರಿಂದ ಮೇ 12ರಂದು ನಡೆಯಬೇಕಿದ್ದ ಚುನಾವಣೆಯನ್ನು ಮುಂದೂಡಲಾಗಿತ್ತು.

ಕಾಂಗ್ರೆಸ್‌ ಪಕ್ಷದಿಂದ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯಾ ರೆಡ್ಡಿ, ಜೆಡಿಎಸ್‌ನಿಂದ ಕಾಳೇಗೌಡ ಹಾಗೂ ಪಕ್ಷೇತರರಾಗಿ ‘ಲಂಚ ಮುಕ್ತ ಕರ್ನಾಟಕ’ ಸಂಘಟನೆ ಮುಖಂಡ ರವಿಕೃಷ್ಣಾರೆಡ್ಡಿ ಕಣದಲ್ಲಿದ್ದಾರೆ. ಈಗ ಬಿಜೆಪಿ ಅಭ್ಯರ್ಥಿ ಮಾತ್ರ ನಾಮಪತ್ರ ಸಲ್ಲಿಸಬೇಕಿದೆ.

ADVERTISEMENT

ಬಿಜೆಪಿ ಟಿಕೆಟ್‌ಗಾಗಿ ಪೈಪೋಟಿ ಆರಂಭವಾಗಿದ್ದು, ವಿಜಯ ಕುಮಾರ್‌ ನಿಧನದ ಅನುಕಂಪವನ್ನು ಬಂಡವಾಳ ಮಾಡಿಕೊಳ್ಳುವ ಉದ್ದೇಶದಿಂದ ಅವರ ಅಣ್ಣನ ಮಗ ರಾಮು ಅವರಿಗೆ ಟಿಕೆಟ್‌ ಕೊಡಲು ಪಕ್ಷ ಚಿಂತಿಸುತ್ತಿದೆ. ಅಲ್ಲದೆ, ಕೇಂದ್ರ ಸಚಿವ ಅನಂತ ಕುಮಾರ್‌ ಅವರ ಪತ್ನಿ ತೇಜಸ್ವಿನಿ, ವಿಧಾನ ಪರಿಷತ್‌ ಸದಸ್ಯೆ ತಾರಾ ಅನೂರಾಧ ಅವರ ಹೆಸರುಗಳೂ ಕೇಳಿಬರುತ್ತಿವೆ.

ಜೆ.ಪಿ. ನಗರ, ಸಾರಕ್ಕಿ ಹಾಗೂ ಶಾಕಾಂಬರಿ ನಗರಗಳಲ್ಲಿ ಪ್ರಭಾವ ಹೊಂದಿದ್ದಾರೆ ಎನ್ನಲಾದ ಮಾಜಿ ಮೇಯರ್‌ ಎಚ್‌.ಕೆ. ನಟರಾಜ್‌, ಪಟ್ಟಾಭಿ
ರಾಮನಗರ ಪಾಲಿಕೆ ಸದಸ್ಯೆ ನಾಗರತ್ನ ಅವರ ಪತಿ ರಾಮಮೂರ್ತಿ ಬಿಜೆಪಿ ಟಿಕೆಟ್‌ಗಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಪಕ್ಷ ಶೀಘ್ರವೇ ಅಭ್ಯರ್ಥಿಯನ್ನು ಅಂತಿಮಗೊಳಿಸಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.