ಮುಂಬೈ: ಚುನಾವಣೆ ಗೆಲ್ಲಲು ಬಿಜೆಪಿ ಇವಿಎಂ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಶಿವಸೇನಾ ಟೀಕಿಸಿದೆ.
‘ಇವಿಎಂ ಬಳಸಿ ನಡೆಸುವ ಚುನಾವಣಾ ವ್ಯವಸ್ಥೆಯನ್ನು ಜನ ನಂಬುತ್ತಿಲ್ಲ. ಬೆಂಗಳೂರಿನಲ್ಲಿ ಮತದಾರರ ನಕಲಿ ಗುರುತಿನ ಚೀಟಿಗಳನ್ನು ವಶಪಡಿಸಿಕೊಂಡಿರುವುದು, ಕರ್ನಾಟಕದಲ್ಲಿ ಚುನಾವಣಾ ಪ್ರಕ್ರಿಯೆ ಎಂತಹ ಅಧೋಗತಿಗೆ ತಲುಪಿದೆ ಎಂಬುದನ್ನು ತೋರುತ್ತದೆ. ಹೇಗಾದರೂ ಮಾಡಿ ಚುನಾವಣೆ ಗೆಲ್ಲಬೇಕು ಎಂಬ ಕಾಂಗ್ರೆಸ್ ತತ್ವವನ್ನೇ ಬಿಜೆಪಿ ಈಗ ಅಳವಡಿಸಿಕೊಂಡಿದೆ’ ಎಂದು ತನ್ನ ಮುಖವಾಣಿ ‘ಸಾಮ್ನಾ’ದಲ್ಲಿ ಶಿವಸೇನಾ ವ್ಯಂಗ್ಯವಾಡಿದೆ.
‘ಬಿಜೆಪಿ ಭಾರಿ ಪ್ರಮಾಣದ ಹಣವನ್ನು ಈ ಚುನಾವಣೆಯಲ್ಲಿ ಖರ್ಚು ಮಾಡುತ್ತಿದೆ. ಇಷ್ಟೊಂದು ಹಣ ಆ ಪಕ್ಷಕ್ಕೆ ಎಲ್ಲಿಂದ ಬಂತು ಎಂಬುದು ಗುಟ್ಟಾಗಿ ಉಳಿದಿಲ್ಲ. ಬಹುಶಃ ಹಣವನ್ನು ಪ್ರತಿ ಮನೆಯಲ್ಲಿರುವ ಮುದ್ರಾ ಬ್ಯಾಂಕಿನಲ್ಲಿ ಮುದ್ರಿಸುತ್ತಿರಬಹುದು’ ಎಂದೂ ವ್ಯಂಗ್ಯ ಮಾಡಿದೆ.
‘ಇಂತಹ ಕಾರ್ಯವನ್ನು ಇದುವರೆಗೆ ಕಾಂಗ್ರೆಸ್ ಮಾಡುತ್ತಿತ್ತು. ಈಗ ಬಿಜೆಪಿ ಮುಂದುವರಿಸಿಕೊಂಡು ಹೋಗುತ್ತಿದೆ’ ಎಂದು ಆರೋಪಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.