ಹುಬ್ಬಳ್ಳಿ: ಮಹದಾಯಿ ವಿವಾದ ಪರಿಹರಿಸಲು ಶೀಘ್ರವೇ ಕ್ರಮ ಕೈಗೊಳ್ಳಿ ಎಂದು ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದರು.
ಉತ್ತರ ಕರ್ನಾಟಕದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗಿರುವುದರಿಂದ ವಿಳಂಬ ಮಾಡದೇ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಬೇಕು ಎಂದು ಆಗ್ರಹಿಸಿದರು.
ಇದೇ ಮೊದಲ ಬಾರಿಗೆ ರಾಹುಲ್ ಮಹದಾಯಿ ವಿವಾದ ಪ್ರಸ್ತಾಪ ಮಾಡಿದರು.
ಚೌಕಿದಾರ ಗಪ್ ಚುಪ್!
ಯುದ್ಧ ವಿಮಾನಗಳನ್ನು ತಯಾರಿಸುವ ಅನುಭವವೇ ಇಲ್ಲದ ಫ್ರಾನ್ಸ್ನ ರಾಫೆಲ್ ಕಂಪೆನಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಯುದ್ಧ ವಿಮಾನ ತಯಾರಿಸುವ ಗುತ್ತಿಗೆ ನೀಡಿದ್ದಾರೆ. ಅವರ ಮುಂದೆಯೇ ಸಾವಿರಾರು ಕೋಟಿ ಭ್ರಷ್ಟಾಚಾರ ನಡೆಯುತ್ತಿದ್ದರೂ ಚೌಕಿದಾರ (ನರೇಂದ್ರ ಮೋದಿ) ಗಪ್ ಚುಪ್ ಆಗಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಲೇವಡಿ ಮಾಡಿದರು.
ನಗರದ ನೆಹರೂ ಮೈದಾನದಲ್ಲಿ ನಡೆಯುತ್ತಿರುವ ಜನಾಶೀರ್ವಾದ ಯಾತ್ರೆಯಲ್ಲಿ ಮಾತನಾಡಿದ ಅವರು, ಯುದ್ಧ ವಿಮಾನ ತಯಾರಿಸಲು ಬೆಂಗಳೂರಿನ ಎಚ್ಎಎಲ್ಗೆ ಕೊಟ್ಟಿದ್ದರೆ ಸಾವಿರಾರು ಯುವಕರಿಗೆ ಉದ್ಯೋಗ ದೊರೆಯುತ್ತಿತ್ತು ಎಂದರು.
ಒಂದು ಯುದ್ಧ ವಿಮಾನ ಖರೀದಿಗೆ ಎಷ್ಟು ಖರ್ಚಾಗುತ್ತದೆ ಎಂಬ ವಿವರ ನೀಡುವಂತೆ ಕೋರಿದಾಗ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ರಾಷ್ಟ್ರೀಯ ಭದ್ರತೆಯ ನೆಪ ಒಡ್ಡಿ ಬಹಿರಂಗ ಪಡಿಸಲು ನಿರಾಕರಿಸಿದರು. ಜನರ ತೆರಿಗೆ ಹಣದ ಬಗ್ಗೆ ವಿವರ ನೀಡಲು ಕಷ್ಟವೇನು ಎಂದು ಪ್ರಶ್ನಿಸಿದರು.
ನವನಗರದ ಬಳಿ ನೇರವಾಗಿ ಜನರ ಬಳಿ ತೆರಳಿದ ರಾಹುಲ್ ಗಾಂಧಿ ಕೆಲ ಕಾಲ ಭದ್ರತೆ ಇಲ್ಲದೆ ಜನರ ಮಧ್ಯೆ ಸಿಲುಕಿದರು. ವಿಶೇಷ ಭದ್ರತಾ ಪಡೆಯ ಸಿಬ್ಬಂದಿ ಇದ್ದರೂ ಪಕ್ಷದ ಕಾರ್ಯಕರ್ತರು ರಾಹುಲ್ರನ್ನು ಸುತ್ತುವರಿದರು. ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ತಂದ ಎಸ್ಪಿಜಿ ಪಡೆ ಅವರನ್ನು ಬಸ್ ಬಳಿ ಕರೆತಂದಿತು.
ಹಜರತ್ ಸಯ್ಯದ್ ಫತೇ ಶಹಾ ವಲಿ ದರ್ಗಾಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಸಚಿವ ರೋಷನ್ ಬೇಗ್, ಮಾಜಿ ಸಚಿವ ಎ.ಎಂ.ಹಿಂಡಸಗೇರಿ ಹಾಗೂ ಕಾಂಗ್ರೆಸ್ ಮುಖಂಡರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.