ADVERTISEMENT

ಮೋದಿಯಿಂದ ದೇಶವನ್ನು ಮುಕ್ತಗೊಳಿಸಿ: ಜೇಠ್ಮಲಾನಿ

ವಿದೇಶದಲ್ಲಿರುವ ಕಪ್ಪು ಹಣ ತರುತ್ತೇನೆಂದವರು ಈಗ ಸುಮ್ಮನಾಗಿದ್ದಾರೆ...

​ಪ್ರಜಾವಾಣಿ ವಾರ್ತೆ
Published 7 ಮೇ 2018, 19:30 IST
Last Updated 7 ಮೇ 2018, 19:30 IST
ಪತ್ರಕರ್ತರ ಜೊತೆ ನಡೆದ ಸಂವಾದ ದಲ್ಲಿ ಹಿರಿಯ ವಕೀಲ ರಾಮ್ ಜೇಠ್ಮಲಾನಿ ಮಾತನಾಡಿದರು
ಪತ್ರಕರ್ತರ ಜೊತೆ ನಡೆದ ಸಂವಾದ ದಲ್ಲಿ ಹಿರಿಯ ವಕೀಲ ರಾಮ್ ಜೇಠ್ಮಲಾನಿ ಮಾತನಾಡಿದರು   

ಬೆಂಗಳೂರು: ‘ಮೋಸಗಾರ ನರೇಂದ್ರ ಮೋದಿಗೆ ಜನ ತಕ್ಕ ಪಾಠ ಕಲಿಸಲೇಬೇಕು. ಆತನಿಗೆ ಬುದ್ಧಿ ಕಲಿಸುವುದಕ್ಕಾಗಿ ನನ್ನ ಕೊನೇ ಉಸಿರು ಇರುವ ತನಕ ಹೋರಾಡುತ್ತೇನೆ...’

ಇದು ಹಿರಿಯ ವಕೀಲ ರಾಮ್ ಜೇಠ್ಮಲಾನಿ ಅವರು ಪ್ರಧಾನಿ ವಿರುದ್ಧ ಗುಡುಗಿದ ಪರಿ.

ಸೋಮವಾರ ಬೆಳಿಗ್ಗೆ ಪ್ರೆಸ್ ಕ್ಲಬ್‌ನಲ್ಲಿ ‘ಮಾತು ಮಂಥನ‘ ಕಾರ್ಯಕ್ರಮದಲ್ಲಿ ಪತ್ರಕರ್ತರ ಜೊತೆ ಸಂವಾದ ನಡೆಸಿದ ಅವರು, ‘ಈ ದೇಶ ದುರದೃಷ್ಟಕರ ರೀತಿಯಲ್ಲಿ ಮೋದಿಯ ಕೈಯೊಳಗೆ ಸಿಲುಕಿದೆ. ದಿನದಿಂದ ದಿನಕ್ಕೆ ಅವರ ವೈಫಲ್ಯಗಳು ಹೆಚ್ಚುತ್ತಿವೆ’ ಎಂದರು.

ADVERTISEMENT

‘ಮೋದಿಯನ್ನು ನಂಬಿ ಹಾಗೂ ಮೋದಿಯನ್ನು ಪ್ರಧಾನಿ ಮಾಡಿ ಎಂದು ಹೇಳಿ ಜೀವನದಲ್ಲಿ ನಾನು ದೊಡ್ಡ ತಪ್ಪು ಮಾಡಿದ್ದೇನೆ ಹಾಗೂ ಮೂರ್ಖನಾಗಿದ್ದೇನೆ’ ಎಂದೂ ವಿಷಾದಿಸಿದರು.

‘ವಿದೇಶದಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ತರುತ್ತೇನೆಂದು ಪ್ರಣಾಳಿಕೆಯಲ್ಲಿ ನನ್ನಿಂದ ಬರೆಸಿಕೊಂಡ ಮೋದಿ ಮತ್ತು ಅವರ ಸಂಗಡಿಗರು ಇಂದು ಅದರ ಕುರಿತು ಚಕಾರ ಎತ್ತುತ್ತಿಲ್ಲ. ಈ ಬಗ್ಗೆ ಅಮಿತ್‌ ಶಾನಂಥವರು, ಇದೊಂದು ನಗೆಚಾಟಿಯ ವಿಷಯ ಎಂದು ಉಡಾಫೆಯ ಮಾತುಗಳನ್ನಾಡುತ್ತಾರೆ’ ಎಂದು ಕಿಡಿಕಾರಿದರು.

‘ಕರ್ನಾಟಕದ ಜನ ಚುನಾವಣೆಯಲ್ಲಿ ಮೋದಿಯ ಮೋಡಿ ಮಾತುಗಳಿಗೆ ಮರುಳಾಗದಂತೆ ಎಚ್ಚರಿಕೆ ವಹಿಸಬೇಕು. ನಿಮಗಿಷ್ಟ ಬಂದವರಿಗೆ ಮತ ನೀಡಿ. ಆದರೆ ಮೋದಿಯಂಥ ಕುಕೃತ್ಯಗಾರನ ಮೋಸಗಳನ್ನು ಮರೆಯಬೇಡಿ’ ಎಂದರು.

‘ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಕೆಲವು ಪ್ರಮುಖ ಪ್ರಕರಣಗಳಲ್ಲಿ ರಾಜಿಯಾಗುತ್ತಿದ್ದಾರೆ, ಇದಕ್ಕೆ ಏನೆನ್ನುತ್ತೀರಿ’ ಎಂಬ ಪ್ರಶ್ನೆಗೆ, ‘ನಾನು ಬಂದಿರುವುದು ಮೋದಿಯ ಮೋಸ ಕೃತ್ಯಗಳನ್ನು ಬಯಲಿಗೆಳೆಯುವುದಕ್ಕೆ. ಹಾಗಾಗಿ ದಯವಿಟ್ಟು ಬೇರೆ ವಿಷಯ ಕೇಳಲು ಇದು ವೇದಿಕೆಯಲ್ಲ’ ಎಂದು ಸ್ಪಷ್ಟವಾಗಿ ಹೇಳಿದರು.

‘ನಾನು ವಿದೇಶದಲ್ಲಿರುವ ಕಪ್ಪುಹಣವನ್ನು ಭಾರತಕ್ಕೆ ತರಬೇಕೆಂದು ಸಾಕಷ್ಟು ಪ್ರಯತ್ನಿಸಿದ್ದೇನೆ. ಈ ವಿಷಯದಲ್ಲಿ ನನ್ನ ಮನೆಗೆ ಬಂದು ಮೋದಿ, ನಾನು ಆ ಕೆಲಸ ಮಾಡುತ್ತೇನೆ ಎಂದಾಗ, ಅದನ್ನು ನಂಬಿ ಕೆಟ್ಟು ಹೋದೆ’ ಎಂದರು.

‘ಚುನಾವಣೆ ಪ್ರಣಾಳಿಕೆ ಸಿದ್ಧವಾಗುವುದಕ್ಕೂ ಮುನ್ನ ನನ್ನ ಮನೆಯ ಮುಂದೆ ಠಳಾಯಿಸುತ್ತಿದ್ದ ಇವರೆಲ್ಲಾ, ಇಂದು ತೆಪ್ಪಗಿದ್ದಾರೆ. ಕೊಟ್ಟ ಮಾತಿಗೆ ತಪ್ಪಿ ಇಡೀ ದೇಶವನ್ನೇ ಮೋಸಗೊಳಿಸಿದ್ದಾರೆ. ಮೋದಿ ವಿರುದ್ಧ ದಿಟ್ಟತನದಿಂದ ಹೋರಾಡುವ ಏಕೈಕ ಹೋರಾಟಗಾರನೇನಾದರೂ ಇದ್ದರೆ ಅದು ಜೇಠ್ಮ
ಲಾನಿ ಮಾತ್ರ. ನಾನೀಗ ವಕೀಲಿ ವೃತ್ತಿಯಿಂದ ನಿವೃತ್ತನಾಗಿದ್ದೇನೆ.ನನಗೀಗ ಬೇರಾವ ಕೆಲಸವೂ ಇಲ್ಲ. ಮೋದಿಯ ಮೋಸವನ್ನು ಜನರಿಗೆ ತಿಳಿಸುವುದಷ್ಟೇ ನನ್ನ ಕೆಲಸ’ ಎಂದರು.

‘ಈ ಮೋಸಗಾರನನ್ನು ಶಿಕ್ಷಿಸಲೇಬೇಕು. ಮೋದಿ ತೊಲಗಲೇ ಬೇಕು’ ಎಂದು ಹೇಳಿದರು. ಇದೇ ವೇಳೆ, ಮೋದಿ ವಿರುದ್ಧ ತಾವು ಸಿದ್ಧಪಡಿಸಿರುವ ದೋಷಾರೋಪ ಪಟ್ಟಿಯನ್ನೂ ನೀಡಿದರು.

‘ಬಿಜೆಪಿ ಅಭ್ಯರ್ಥಿಗಳೇ ಹೆಚ್ಚು ಅಪರಾಧ ಪ್ರಕರಣ ಎದುರಿಸುತ್ತಿದ್ದಾರೆ...’

ಶೇ 37ರಷ್ಟು ಬಿಜೆಪಿ ಅಭ್ಯರ್ಥಿಗಳು ಅಪರಾಧದ ಹಿನ್ನೆಲೆಯುಳ್ಳವರಾಗಿದ್ದಾರೆ ಎಂಬ ಅಸೋಸಿಯೇಷನ್‌ ಫಾರ್ ಡೆಮಾಕ್ರೆಟಿಕ್‌ ರಿಫಾರ್ಮ್ಸ್ ಸ್ವಯಂ ಸೇವಾ ಸಂಸ್ಥೆಯ ಅಧ್ಯಯನ ವರದಿಯನ್ನು ಜೇಠ್ಮಲಾನಿ ಉಲ್ಲೇಖಿಸಿದರು.

‘ರಾಜ್ಯದ ಚುನಾವಣೆ ಬಗ್ಗೆ ಏನು ಹೇಳುತ್ತೀರಿ’ ಎಂಬ ಪ್ರಶ್ನೆಗೆ ಅವರು, ವರದಿ ಪ್ರಕಟವಾಗಿದ್ದ ಪತ್ರಿಕೆಯನ್ನು ಪದೇ ಪದೇ ಎತ್ತಿ ಹಿಡಿದು ತೋರಿಸುತ್ತಾ ಅದರಲ್ಲಿದ್ದ ಅಂಶಗಳನ್ನು ಒತ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.