ಶಿವಮೊಗ್ಗ: ಮಾಜಿ ಶಾಸಕ ಕರಿಯಣ್ಣ ಅವರ ಪುತ್ರ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಎಸ್.ಕೆ. ಶ್ರೀನಿವಾಸ್ ಅವರ ರಾಜೀನಾಮೆ ಪ್ರಹಸನ ಈಗ ವಿವಾದ ಹುಟ್ಟುಹಾಕಿದೆ.
ಹೊಸಕೋಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಾಗಿದ್ದ (ಹಿರಿಯ ಸ್ಥಾನಿಕ ವೈದ್ಯಾಧಿಕಾರಿ) ಶ್ರೀನಿವಾಸ್ ಅವರು ಬೆಂಗಳೂರಿನ ಬೌರಿಂಗ್ ಹಾಗೂ ಲೇಡಿ ಕರ್ಜನ್ ಆಸ್ಪತ್ರೆಗೆ ನಿಯೋಜನೆಗೊಂಡಿದ್ದರು. ಟಿಕೆಟ್ ಘೋಷಣೆಯಾದ ಮೇಲೆ ರಾಜೀನಾಮೆ ಸಲ್ಲಿಸಿದ್ದಾರೆ. ಇದು ನಿಯಮಬಾಹಿರ ಎಂದು ಅವರದೇ ಪಕ್ಷದ ಕೆಲವು ಮುಖಂಡರು ಸರ್ಕಾರಕ್ಕೆ, ಪಕ್ಷದ ಹೈಕಮಾಂಡ್ಗೆ ದೂರು ಸಲ್ಲಿಸಿದ್ದಾರೆ.
ಸರ್ಕಾರಿ ನೌಕರರ ಸ್ವಯಂ ನಿವೃತ್ತಿ ನಿಯಮಗಳನ್ನು ಶ್ರೀನಿವಾಸ್ ಉಲ್ಲಂಘಿಸಿದ್ದಾರೆ. ಹಾಗಾಗಿ, ಅವರಿಗೆ ‘ಬಿ’ ಫಾರಂ ನೀಡಬಾರದು ಎಂದು ಪಕ್ಷದ ಮುಖಂಡರ ಮೇಲೆ ಒತ್ತಡ ಹಾಕಿದ್ದಾರೆ.
‘ಶ್ರೀನಿವಾಸ್ ಅವರು ಪ್ರಸಕ್ತ ವರ್ಷದ ಫೆ. 1ರಿಂದಲೇ ಕರ್ತವ್ಯಕ್ಕೆ ಗೈರುಹಾಜರಾಗಿದ್ದಾರೆ. ಅಂದಿನಿಂದಲೇ ರಾಜೀನಾಮೆ ಪರಿಗಣಿಸಬೇಕು ಎಂದು ಕೋರಿದ್ದಾರೆ. ಅವರ ವಿರುದ್ಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತಾಲಯದಲ್ಲಿ ಯಾವುದೇ ವಿಚಾರಣೆಗಳು ಬಾಕಿ ಇಲ್ಲ. ಅಲ್ಲದೆ, ಅವರು ಕೇವಲ 12 ತಿಂಗಳು ಸದರಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿರುವ ಕಾರಣ, ಕರ್ನಾಟಕ ನಾಗರಿಕ ಸೇವಾ ನಿಯಮದಂತೆ (ಕಾಯಂ ಪೂರ್ವ ಸೇವಾ ಅವಧಿ) ಅವರ ರಾಜೀನಾಮೆ ಅಂಗೀಕರಿಸಲಾಗಿದೆ’ ಎಂದು ಸರ್ಕಾರದ ಉಪ ಕಾರ್ಯದರ್ಶಿ ವಿ. ಹನುಮಂತಯ್ಯ ಲಿಖಿತ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.