ADVERTISEMENT

ಸಿದ್ದರಾಮಯ್ಯ ಪರ ಪ್ರಚಾರ: ದರ್ಶನ್‌ಗೆ ಪ್ರತಿಭಟನೆ ಬಿಸಿ

​ಪ್ರಜಾವಾಣಿ ವಾರ್ತೆ
Published 5 ಮೇ 2018, 19:40 IST
Last Updated 5 ಮೇ 2018, 19:40 IST
ಸಿದ್ದರಾಮಯ್ಯ ಪರ ಪ್ರಚಾರ: ದರ್ಶನ್‌ಗೆ ಪ್ರತಿಭಟನೆ ಬಿಸಿ
ಸಿದ್ದರಾಮಯ್ಯ ಪರ ಪ್ರಚಾರ: ದರ್ಶನ್‌ಗೆ ಪ್ರತಿಭಟನೆ ಬಿಸಿ   

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಶನಿವಾರ ಪ್ರಚಾರಕ್ಕೆ ಬಂದ ಚಿತ್ರನಟ ದರ್ಶನ್‌, ತಾಲ್ಲೂಕಿನ ನಾಗನಹಳ್ಳಿ ಗ್ರಾಮದಲ್ಲಿ ಜೆಡಿಎಸ್‌ ಕಾರ್ಯಕರ್ತರ ಪ್ರತಿಭಟನೆ ಎದುರಿಸಬೇಕಾಯಿತು.

ರೋಡ್‌ ಷೋ ನಡೆಸಿ ವಾಪಸಾಗುವ ವೇಳೆ ಕೆಲವು ಕಾರ್ಯಕರ್ತರು ದರ್ಶನ್‌ ಅವರಿಗೆ ತಡೆಯೊಡ್ಡಿದರು. ಪಕ್ಷದ ಬಾವುಟ ಬೀಸುತ್ತಾ ಜಿ.ಟಿ.ದೇವೇಗೌಡರ ಪರ ಘೋಷಣೆ ಕೂಗಿದರು. ತ‌ಕ್ಷಣ ಎಚ್ಚೆತ್ತ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದರು.

ಇದಕ್ಕೂ ಮುನ್ನ ಜೆಡಿಎಸ್‌ ಕಾರ್ಯಕರ್ತರು ತಮ್ಮ ಗ್ರಾಮಕ್ಕೆ ದರ್ಶನ್‌ ಭೇಟಿ ವಿರೋಧಿಸಿ ಘೋಷಣೆ ಕೂಗಿದ್ದರು. ಮತ್ತೊಂದೆಡೆ, ಕಾಂಗ್ರೆಸ್‌ ಕಾರ್ಯಕರ್ತರು ಪಟಾಕಿ ಸಿಡಿಸಿ ನಟನಿಗೆ ಅದ್ಧೂರಿ ಸ್ವಾಗತ ನೀಡಿದರು. ಎರಡೂ ಪಕ್ಷಗಳ ಕಾರ್ಯಕರ್ತರು ವಾಗ್ವಾದ ನಡೆಸಿದ್ದರಿಂದ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ADVERTISEMENT

ಭರ್ಜರಿ ಪ್ರಚಾರ: ಬೆಳಿಗ್ಗೆಯಿಂದ ಸಂಜೆವರೆಗೆ ಕ್ಷೇತ್ರದ 30ಕ್ಕೂ ಅಧಿಕ ಗ್ರಾಮಗಳಲ್ಲಿ ದರ್ಶನ್‌ ರೋಡ್‌ ಷೋ ನಡೆಸಿದರು. ವರುಣಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಾ. ಯತೀಂದ್ರ ಸಿದ್ದರಾಮಯ್ಯ ಮತ್ತು ಸ್ಥಳೀಯ ಮುಖಂಡರು ಸಾಥ್‌ ನೀಡಿದರು.

ಮುಖ್ಯಮಂತ್ರಿ ಗೆಲುವಿಗೆ ಮುಡಿ ಹರಕೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೆಲುವಿಗಾಗಿ ಚಾಮುಂಡೇಶ್ವರಿ ಕ್ಷೇತ್ರದ ಕಾರ್ಯಕರ್ತರು ವಿಶೇಷ ಪೂಜೆ ಮಾಡಿ, ಹರಕೆ ಸಲ್ಲಿಸಿದ್ದಾರೆ.

ರಮಾಬಾಯಿ ನಗರದ ಐವರು ಕಾರ್ಯಕರ್ತರು ಶನಿವಾರ ಮುಡಿ ಕೊಟ್ಟರೆ, ಗೊರೂರಿನ ನಿವಾಸಿಗಳು ಕಳಶ ಹೊತ್ತು ಮೆರವಣಿಗೆ ನಡೆಸಿದರು. ಮಹಿಳೆಯರು ಚಾಮುಂಡಿದೇವಿಗೆ ಪೂಜೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.