ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ರವಿ ಕೃಷ್ಣರೆಡ್ಡಿ ಹಮ್ಮಿಕೊಂಡಿದ್ದ ‘ಒಂದು ಓಟು; ಒಂದು ನೋಟು’ ಅಭಿಯಾನಕ್ಕೆ ಸ್ವರಾಜ್ ಇಂಡಿಯಾದ ಅಧ್ಯಕ್ಷ ಯೋಗೇಂದ್ರ ಯಾದವ್ ಬುಧವಾರ ಇಲ್ಲಿ ಚಾಲನೆ ನೀಡಿದರು.
‘ಆ ವ್ಯವಸ್ಥೆ ಸರಿಯಿಲ್ಲ, ಈ ಸೌಲಭ್ಯ ಉತ್ತಮವಾಗಿಲ್ಲ ಎಂದು ದೂರುವುದರಲ್ಲೇ ಭಾರತೀಯರು ಹೆಚ್ಚು ಕಾಲ ಕಳೆಯುತ್ತಾರೆ. ಇವೆಲ್ಲ ಬಿಟ್ಟು ಎಲ್ಲರೂ ಸಮಸ್ಯೆಗಳ ಪರಿಹಾರದ ಭಾಗವಾಗಬೇಕು. ಆಗ ಮಾತ್ರ ಬದಲಾವಣೆ ಸಾಧ್ಯ’ ಎಂದು ಅವರು ಹೇಳಿದರು.
‘ಹಣಕ್ಕಾಗಿ ರಾಜಕೀಯ, ರಾಜಕೀಯಕ್ಕಾಗಿ ಹಣ ಎನ್ನುವ ಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ. ಪ್ರಾಮಾಣಿಕರು ಮತ್ತು ಅರ್ಹರಾಗಿರುವವರನ್ನು ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ಈ ಪರಿಸ್ಥಿತಿಯಿಂದ ದೇಶಕ್ಕೆ ಮುಕ್ತಿ ನೀಡಬೇಕಾಗಿದೆ’ ಎಂದು ತಿಳಿಸಿದರು.
ಸಾಹಿತಿ ದೇವನೂರ ಮಹಾದೇವ ಮಾತನಾಡಿ, ವಿಧಾನಸಭೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪೈಕಿ 25 ಮಂದಿ ಪ್ರಾಮಾಣಿಕರು ಸಿಕ್ಕರೆ ಅದು ನಮ್ಮ ಪಾಲಿನ ಪುಣ್ಯ. ಪ್ರಾಮಾಣಿಕರನ್ನು ಆಯ್ಕೆ ಮಾಡುವ ಮೂಲಕ ಹಣಕ್ಕಾಗಿ ನಡೆಯುತ್ತಿರುವ ರಾಜಕಾರಣಕ್ಕೆ ಇತಿಶ್ರೀ ಹಾಡಿ ಜನರಿಂದ ಜನರಿಗಾಗಿ ರಾಜಕಾರಣಕ್ಕೆ ನಾಂದಿ ಹಾಡಬೇಕು ಎಂದು ಮನವಿ ಮಾಡಿದರು.
ಜನಸಂಗ್ರಾಮ ಪರಿಷತ್ ಮುಖ್ಯಸ್ಥ ಎಸ್.ಆರ್ ಹಿರೇಮಠ ಮಾತನಾಡಿ, ರಾಜಕಾರಣದಲ್ಲಿ ಹಣ ವ್ಯಾಪಕವಾಗಿದೆ. ಕಾರ್ಪೊರೇಟ್ ಶಕ್ತಿಗಳು ದೇಶವನ್ನು ಆಳುತ್ತಿವೆ. ಅವರ ಪ್ರಭಾವ ಹಿಮ್ಮೆಟ್ಟಿಸಲು ಮತ್ತು ಪ್ರಜಾಪ್ರಭುತ್ವ ಉಳಿಸಲು ದುಷ್ಟ ಶಕ್ತಿಗಳು ಅಧಿಕಾರಕ್ಕೆ ಬರದಂತೆ ತಡೆಯಬೇಕು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.