ADVERTISEMENT

ಹೀಗೂ ಇತ್ತಾ...?

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2018, 19:30 IST
Last Updated 16 ಏಪ್ರಿಲ್ 2018, 19:30 IST

'ಪ್ರಚಾರಕ್ಕೆ ವಿರೋಧ ಪಕ್ಷದವರಿಂದ ಹಣ ಪಡೆದರು' ಎಂಬ ಶೀರ್ಷಿಕೆಯಡಿ, 1967ರಲ್ಲಿ ನಡೆದ ಘಟನೆ ಕುರಿತು ವರದಿಯಾಗಿದೆ (ಪ್ರ.ವಾ., ಪ್ರಜಾಮತ ಏ. 10). ಕಡಿದಾಳ್ ಮಂಜಪ್ಪನವರು ವಿರೋಧ ಪಕ್ಷದವರಾದ ಶಾಂತವೇರಿ ಗೋಪಾಲಗೌಡರ ಆರ್ಥಿಕ ಪರಿಸ್ಥಿತಿಯನ್ನು ಅರಿತು ಧನಸಹಾಯ ಮಾಡಿದ್ದರು ಎಂಬ ಸಂಗತಿ ಅದರಲ್ಲಿ ಉಲ್ಲೇಖವಾಗಿದೆ.

ಆದರೆ, ಇಂದು ವಿರೋಧ ಪಕ್ಷದವರು ಎಂದರೆ ಸಾಕು; ಪಕ್ಷಭೇದವಿಲ್ಲದೆ ವಿರೋಧಿಗಳ ಮೇಲೆ ಲಗಾಮಿಲ್ಲದಂತೆ ನಾಲಿಗೆ ಹರಿಬಿಡುತ್ತಾರೆ. ತೀರಾ ವೈಯಕ್ತಿಕವಾಗಿ ಹೀಗಳೆಯುತ್ತಾರೆ. ಇದು ಖಂಡಿತಾ ಅಸಮರ್ಥನೀಯ, ಖಂಡನಾರ್ಹ ಹಾಗೂ ಅಸಹ್ಯ ಕೂಡ. ಕೇವಲ ಐವತ್ತು ವರ್ಷಗಳಲ್ಲಿ ರಾಜಕೀಯವೆಂದರೆ ಈ ರೀತಿ ಬದಲಾಗಿ ಹೋಗಿದೆಯೆಂದರೆ, ಇನ್ನು ಮುಂದೆ ಹೇಗೆ ಎಂದು ಊಹಿಸಲೂ ಕಷ್ಟವಾಗುತ್ತದೆ. ಈ ಘಟನೆಯನ್ನು ಓದಿದಾಗ 'ಹೀಗೂ ಇತ್ತಾ...?' ಎಂದು ಇಂದಿನವರು ಮೂಗಿನ ಮೇಲೆ ಬೆರಳಿಡಬೇಕು. ಇನ್ನಾದರೂ ರಾಜಕಾರಣಿಗಳು ಪರಸ್ಪರ ಕೆಸರೆರಚಾಟವನ್ನು ನಿಲ್ಲಿಸಿಯಾರೇ?-ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಆಸಕ್ತಿ ಕೆರಳಿಸುವ ‘ಪ್ರಜಾ ಮತ’

ADVERTISEMENT

ರಾಜಕೀಯ ಎನ್ನುವುದು ಅದೆಷ್ಟೇ ಕೊಳಕಾಗಿದ್ದರೂ ಆಸಕ್ತಿ ಕೆರಳಿಸುವ ಕ್ಷೇತ್ರ. ರಾಜಕಾರಣಿಗಳ ಹಣೆಬರಹವನ್ನು ಬರೆಯುವ ಚುನಾವಣೆಗಳೆಂದರೆ ಅದು ಮತ್ತಷ್ಟು ತೀವ್ರತರನಾದ ಆಸಕ್ತಿಯನ್ನು ಕೆರಳಿಸಿ ಬಿಡುತ್ತದೆ. ಇಂತಹ ದಿನಗಳಲ್ಲಿ ‘ಪ್ರಜಾವಾಣಿ’ಯ ‘ಪ್ರಜಾ ಮತ’ದಲ್ಲಿ ಬರುತ್ತಿರುವ ಸುದ್ದಿಗಳು, ಆಂಬೋಣಗಳು, ಟೀಕೆ– ಟಿಪ್ಪಣಿಗಳು, ವಿಮರ್ಶೆಗಳು ಓದುಗರಲ್ಲಿ ಮತ್ತಷ್ಟು ಆಸಕ್ತಿ ಬೆಳೆಸುತ್ತಿವೆ. ಜನಹಿತಕೆ ದುಡಿದವನು–ಮಿಡಿದವನು ‘ಪ್ರಜಾ ಮತ’ದ ಸರದಾರನಾಗುತ್ತಾನೆ. ಈ ದಿಸೆಯಲ್ಲಿ ಓದುಗನಿಗೆ ಖುಷಿ ನೀಡುತ್ತಿರುವ ಪತ್ರಿಕೆಗೆ ಅಭಿನಂದನೆ.

–ಎಚ್‌. ಆನಂದ್‌ ಕುಮಾರ್‌ ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.