ಬೆಂಗಳೂರು: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಆಡಳಿತ ವಿಷಯಕ್ಕೆ ಸಂಬಂಧಿಸಿದ ಸಮೀಕ್ಷಾ ವರದಿಯನ್ನು ಮುಖ್ಯ ಚುನಾವಣಾ ಆಯುಕ್ತ ಓಂಪ್ರಕಾಶ್ ರಾವತ್ ಶನಿವಾರ ಬಿಡುಗಡೆ ಮಾಡಿದರು.
ಸಮೀಕ್ಷೆಯ ಮಾಹಿತಿಯನ್ನು ‘ಪ್ರಜಾವಾಣಿ’ ಪ್ರತಿ ದಿನ ಪ್ರಕಟಿಸುತ್ತಿದೆ. ಸಮೀಕ್ಷೆಗಾಗಿ 13,244 ಜನರನ್ನು ಸಂಪರ್ಕಿಸಲಾಗಿತ್ತು. ದಕ್ಷ್ ಮತ್ತು ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ಸಂಸ್ಥೆಗಳು ಜಂಟಿಯಾಗಿ ಸಮೀಕ್ಷೆ ನಡೆಸಿವೆ.
ಶೇ 67ರಷ್ಟು ಮತದಾರರು ಅಭ್ಯರ್ಥಿಗಳ ಪಕ್ಷ ನೋಡಿ ಮತ ಚಲಾಯಿಸುವುದಾಗಿ ಹೇಳಿದ್ದರೆ, ಶೇ 42ರಷ್ಟು ಜನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಧರಿಸಿ ಮತ ನೀಡುತ್ತೇವೆ ಎಂದು ಹೇಳಿದ್ದಾರೆ.
79ರಷ್ಟು ಜನ ‘ಅನ್ನಭಾಗ್ಯ’ದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಶೇ 6ರಷ್ಟು ಜನ ಈ ಯೋಜನೆ ಪಡೆಯುವುದಿಲ್ಲ ಎಂದಿದ್ದಾರೆ. ಶೇ 14ರಷ್ಟು ಜನ ಯೋಜನೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
ಆಯುಕ್ತರಿಂದ ಅಧಿಕಾರಿಗಳ ಸಭೆ
ಬೆಂಗಳೂರು: ವಿಧಾನಸಭಾ ಚುನಾವಣೆ ಸಿದ್ಧತೆ ಕುರಿತು ಮುಖ್ಯ ಚುನಾವಣಾ ಆಯುಕ್ತ ಓ.ಪಿ.ರಾವತ್ ರಾಜ್ಯ ಚುನಾವಣಾಧಿಕಾರಿಗಳ ಜತೆ ಶನಿವಾರ ಚರ್ಚೆ ನಡೆಸಿದರು. ಶುಕ್ರವಾರ ನಗರಕ್ಕೆ ಬಂದ ಅವರು ಶನಿವಾರ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜತೆ ಮಾತುಕತೆ ನಡೆಸಿದರು.
ವಿವಿಧ ರಾಜ್ಯಗಳಿಂದ ತರಿಸಿದ ವಿದ್ಯುನ್ಮಾನ ಮತಯಂತ್ರಗಳ ಮೊದಲ ಪರಿಶೀಲನಾ ಪರೀಕ್ಷೆಯ ಬಗ್ಗೆ ಮಾಹಿತಿ ಪಡೆದರು. ಭಾನುವಾರ ಸಭೆ ಮುಂದುವರಿಯಲಿದ್ದು, ಸೋಮವಾರ ಅವರು ದೆಹಲಿಗೆ ವಾಪಸಾಗಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.