ಬೆಂಗಳೂರು: ‘ನಮ್ಮ ಪಕ್ಷದ ಶಾಸಕರಾದ ಮಾನಪ್ಪ ವಜ್ಜಲ್ ಮತ್ತು ಡಾ. ಶಿವರಾಜ ಪಾಟೀಲ ಬಿಜೆಪಿ ಸೇರಿದ್ದರಿಂದ ಯಾವುದೇ ನಷ್ಟ ಇಲ್ಲ’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿದರು.
ಗಾಂಧಿನಗರ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಈ ಇಬ್ಬರು ಮಹಾನುಭಾವರು ನಮ್ಮ ಪಕ್ಷ ಬಿಟ್ಟು ಓಡಿಹೋದರೂ ಸ್ಥಳೀಯ ಕಾರ್ಯಕರ್ತರು ಮತ್ತೆ ಪಕ್ಷಕ್ಕೆ ಶಕ್ತಿ ತುಂಬಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ನನ್ನ ಶಕ್ತಿ ಇನ್ನೂ ಕುಂದಿಲ್ಲ, ಎಲ್ಲಾ ಕಡೆ ಸುತ್ತಾಡಿ ಜನರ ಸಹಕಾರ ಕೋರುತ್ತೇನೆ. ಜೆಡಿಎಸ್ ಮತ್ತೆ ಅಧಿಕಾರಕ್ಕೆ ತರುತ್ತೇನೆ’ ಎಂದರು.
ಸರ್ಕಾರದ ಸಾಧನೆ ಹೇಳುವ ನೆಪದಲ್ಲಿ ಕಾಂಗ್ರೆಸ್ ಸಮಾವೇಶ ನಡೆಯುತ್ತಿದೆ. ಇದಕ್ಕೆ ಬೊಕ್ಕಸದಿಂದ ₹ 650 ಕೋಟಿ ಖರ್ಚು ಮಾಡಲಾಗುತ್ತಿದೆ. ಇದು ಯಾರ ದುಡ್ಡು ಎಂಬುದನ್ನು ಸಿದ್ದರಾಮಯ್ಯ ಜನರಿಗೆ ತಿಳಿಸಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹಾಡಹಗಲೇ ಕೊಲೆ, ದರೋಡೆ ನಡೆಯುತ್ತಿದೆ. ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಕಿರುಕುಳದಿಂದ ಅಧಿಕಾರಿಗಳು ಕೈಚೆಲ್ಲಿದ್ದಾರೆ. ಜನರ ನೆಮ್ಮದಿ ಹಾಳಾಗಿದ್ದು, ಶೋಷಣೆ ರಹಿತ ವ್ಯವಸ್ಥೆ ಮತ್ತೆ ಬರಬೇಕಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.