ಬೆಳಗಾವಿ: ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ, ಇಲ್ಲಿನ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಲಕ್ಷ್ಮಿ ಹೆಬ್ಬಾಳಕರ ಅವರು, ತಮ್ಮ ‘ಲಕ್ಷ್ಮಿತಾಯಿ ಪ್ರತಿಷ್ಠಾನ’ದ ವತಿಯಿಂದ ಮತದಾರರಿಗೆ ‘ಧರ್ಮಯಾತ್ರೆ’ ಆಯೋಜಿಸಿದ್ದಾರೆ.
ಯಾತ್ರೆಗೆ ಮಂಗಳವಾರ ಹಸಿರು ನಿಶಾನೆ ತೋರಿದ ಅವರು, ಹಾಸನ ಜಿಲ್ಲೆ ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಕ್ಷೇತ್ರದ ಆಯ್ದ ಮತದಾರರನ್ನು ಕಳುಹಿಸಿದ್ದಾರೆ.
‘ಮಹಾಮಸ್ತಕಾಭಿಷೇಕ ವೀಕ್ಷಿಸಲು ಜಗತ್ತಿನ ವಿವಿಧೆಡೆಯಿಂದ ಭಕ್ತರು ಬರುತ್ತಿದ್ದಾರೆ. ಈ ಪುಣ್ಯದ ಕಾರ್ಯಕ್ರಮದಲ್ಲಿ ನಮ್ಮ ಗ್ರಾಮೀಣ ಕ್ಷೇತ್ರದ ಭಕ್ತರೂ ಪಾಲ್ಗೊಳ್ಳಬೇಕು ಎಂಬ ಮಹದಾಸೆಯಿಂದ, ಒಪ್ಪಂದದ ಮೇಲೆ ಸಾರಿಗೆ ಸಂಸ್ಥೆಯಿಂದ 14 ಬಸ್ಸುಗಳನ್ನು ಪಡೆದು, ಯಾತ್ರೆ ವ್ಯವಸ್ಥೆ ಮಾಡಿಕೊಟ್ಟಿದ್ದೇನೆ. ಪ್ರತಿಷ್ಠಾನದಿಂದ ಇಂತಹ ಹತ್ತು ಹಲವು ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇನೆ’ ಎಂದು ಲಕ್ಷ್ಮಿ ತಿಳಿಸಿದರು.
‘ಎರಡನೇ ಹಂತದಲ್ಲಿ 30 ಬಸ್ಸುಗಳಲ್ಲಿ ಭಕ್ತರನ್ನು ಧರ್ಮಯಾತ್ರೆಗೆ ಕಳುಹಿಸಲಾಗುವುದು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.