ADVERTISEMENT

ಈಶ್ವರಪ್ಪ ಬೆಂಬಲಿಗರ ಜತೆ ಸಂಧಾನಕ್ಕೆ ಮುಂದಾದ ರಾವ್‌

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2018, 19:30 IST
Last Updated 21 ಫೆಬ್ರುವರಿ 2018, 19:30 IST
ಈಶ್ವರಪ್ಪ ಬೆಂಬಲಿಗರ ಜತೆ ಸಂಧಾನಕ್ಕೆ ಮುಂದಾದ ರಾವ್‌
ಈಶ್ವರಪ್ಪ ಬೆಂಬಲಿಗರ ಜತೆ ಸಂಧಾನಕ್ಕೆ ಮುಂದಾದ ರಾವ್‌   

ಬೆಂಗಳೂರು: ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಬೆನ್ನಿಗೆ ನಿಂತು ಪ್ರತಿಭಟನೆ ನಡೆಸಲು ಮುಂದಾಗಿರುವ ರಾಯಣ್ಣ ಬ್ರಿಗೇಡ್ ಪ್ರಮುಖರ ಜತೆ ಸಂಧಾನ ನಡೆಸಲು ರಾಜ್ಯ ಉಸ್ತುವಾರಿ ಮುರಳೀಧರರಾವ್‌ ಮುಂದಾಗಿದ್ದಾರೆ.

ರಾಯಣ್ಣ ಬ್ರಿಗೇಡ್ ರಾಜ್ಯ ಘಟಕದ ಅಧ್ಯಕ್ಷ, ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಅವರಿಗೆ ಕರೆ ಮಾಡಿರುವ ರಾವ್‌, ಗುರುವಾರ ಸಭೆಗೆ ಬರುವಂತೆ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮನೆಯಲ್ಲಿ ನಡೆದ ಸಭೆಯಲ್ಲಿ, ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಈಶ್ವರಪ್ಪಗೆ ಟಿಕೆಟ್ ನೀಡಬಾರದು ಎಂಬ ಬೇಡಿಕೆ ಮಂಡಿಸಲಾಗಿತ್ತು. ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಟಿಕೆಟ್ ಆಕಾಂಕ್ಷಿಯೂ ಆಗಿರುವ ರುದ್ರೇಗೌಡ ಬೆಂಬಲಿಗರು ಈ ಒತ್ತಾಯ ಹೇರಿದ್ದರು.

ADVERTISEMENT

ಬಿಜೆಪಿಯಲ್ಲಿ ಹಿಂದುಳಿದ ವರ್ಗದವರಿಗೆ ಸಾಕಷ್ಟು ಪ್ರಾತಿನಿಧ್ಯ ಸಿಕ್ಕಿಲ್ಲ. ಹಾಗಿದ್ದರೂ ತಮಗೆ ಕೊಟ್ಟ ಜವಾಬ್ದಾರಿಯನ್ನು ಈಶ್ವರಪ್ಪ ನಿಭಾಯಿಸುತ್ತಿದ್ದಾರೆ. ಅಂತಹ ಹೊತ್ತಿನಲ್ಲಿ ಅವರಿಗೆ ಟಿಕೆಟ್‌ ನೀಡದೇ ಇದ್ದರೆ ಪಕ್ಷ ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬ್ರಿಗೇಡ್‌ ಹೆಸರಿನಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಪತ್ರ ಬರೆಯಲಾಗಿತ್ತು.

ಈಶ್ವರಪ್ಪ ಅವರನ್ನು ಕಡೆಗಣಿಸುವುದನ್ನು ಖಂಡಿಸಿ ಇದೇ 26ರಂದು ಪ್ರತಿಭಟನೆ ನಡೆಸಲು ಬ್ರಿಗೇಡ್ ಪ್ರಮುಖರು ನಿರ್ಧರಿಸಿದ್ದರು. ಇದು ಗೊತ್ತಾಗುತ್ತಿದ್ದಂತೆ ಮಾತುಕತೆ ನಡೆಸಿ ಅತೃಪ್ತಿ ನಿವಾರಿಸಲು ರಾವ್ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.