ADVERTISEMENT

ಮೇ ಬೀ ಚೌಕಿದಾರ್ ಅಭಿಯಾನ ಮಾರ್ಚ್‌ 31ರಂದು

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2019, 14:42 IST
Last Updated 29 ಮಾರ್ಚ್ 2019, 14:42 IST
   

ಶಿವಮೊಗ್ಗ: ಮೋದಿ ಅವರು ದೇಶದ ಚೌಕಿದಾರ (ರಕ್ಷಕ) ಎಂದು ಘೋಷಿಸಿಕೊಂಡು ಅದೇ ರೀತಿ ನಡೆದುಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬರೂ ದೇಶ ರಕ್ಷಣೆಯ ಚೌಕಿದಾರರಾಗಬೇಕು ಎಂಬ ಆಶಯದಿಂದ ಬಿಜೆಪಿ ‘ಮೇ ಬೀ ಚೌಕಿದಾರ್ ಅಭಿಯಾನ ಹಮ್ಮಿಕೊಂಡಿದೆ.

ದೇಶದ ಪ್ರತಿ ಹಳ್ಳಿಗಳಲ್ಲೂ ಈ ಅಭಿಯಾನ, ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಮಾರ್ಚ್‌ 31ರಂದು ಪ್ರಧಾನಿ ಮೋದಿ ಅವರ ಜತೆ ವಿಶೇಷ ನೇರ ಪ್ರಸಾರದ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ 4ಕ್ಕೆ ವಾಣಿಜ್ಯ ಮತ್ತು ಕೈಗಾರಿಕ ಸಂಘದ ಸಭಾಂಗಣದಲ್ಲಿ ಈ ಕಾರ್ಯಕ್ರಮ ಇರುತ್ತದೆ ಎಂದು ಅಭಿಯಾನದ ಸಂಚಾಲಕ ಕುಮಾರ್ ಬಂಗಾರಪ್ಪ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮೋದಿ ಹಲವು ದಿಟ್ಟ ನಿರ್ಧಾರಗಳ ಮೂಲಕ ಭಾರತದ ಸಾಮರ್ಥ್ಯವನ್ನು ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ. ಆದರೆ, ಈ ಕಾರ್ಯ ಮಾಡಿದ್ದು ಸೈನಿಕರು, ವಿಜ್ಞಾನಿಗಳು ಎಂದು ಹೇಳುತ್ತಿರುವ ಕಾಂಗ್ರೆಸ್, ಜೆಡಿಎಸ್ ನಾಯಕರು ಐಟಿ ದಾಳಿಗೆ ಮಾತ್ರ ಮೋದಿ ಕಾರಣ ಎನ್ನುತ್ತಿದ್ದಾರೆ ಎಂದು ಛೇಡಿಸಿದರು.

ADVERTISEMENT

ಅಹಂಕಾರ, ಸ್ವಾರ್ಥದ ಮನೋಭಾವಗಳು ಮಧುಬಂಗಾರಪ್ಪ ಅವರ ಸೋಲಿಗೆ ಕಾರಣವಾಗುತ್ತದೆ. ಅವರು ಚುನಾವಣಾ ಪ್ಯಾಕೇಜ್ ಅಭ್ಯರ್ಥಿ. ಚುನಾವಣೆ ಇದ್ದಾಗ ಮಾತ್ರ ಕ್ಷೇತ್ರಕ್ಕೆ ಬರುತ್ತಾರೆ, ನಂತರ ಅವರು ಪ್ಯಾಕೇಜ್ ಫಾರಿನ್ ಟೂರ್‌ ಹೋಗುತ್ತಾರೆ, ಯಾರ ಕೈಗೂ ಸಿಗುವುದಿಲ್ಲ. ಇಂಥವರ ಬದಲು ದೇಶದ ಸುರಕ್ಷತೆಗೆ ನಿಂತಿರುವ ನರೇಂದ್ರ ಮೋದಿ ಕೈ ಬಲಪಡಿಸಲು ಬಿಜೆಪಿ ಬೆಂಬಲಿಸಬೇಕು ಎಂದರು.

ಮಧು ಬಂಗಾರಪ್ಪ ಶಾಸಕನಾಗಿದ್ದಾಗ ಸೊರಬ ಕ್ಷೇತ್ರಕ್ಕೆ ಏನೂ ಮಾಡಲಿಲ್ಲ. ನಂತರ ಸೋತಾಗಲೂ ಯಾವುದೇ ಯೋಜನೆ ಅನುಷ್ಠಾನಕ್ಕೆ ಶ್ರಮಿಸಲಿಲ್ಲ. ರೈತರಿಗೆ ಸಾಗುವಳಿ ಚೀಟಿ ಕೊಡಿಸಲೂ ಆಗಲಿಲ್ಲ. 3 ಸಾವಿರ ಸಾಗುವಳಿ ಚೀಟಿ ನೀಡಿ, 7 ಸಾವಿರ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಡಿ.ಎಸ್. ಅರುಣ್, ಎಸ್.ಎನ್. ಚನ್ನಬಸಪ್ಪ, ಮಧುಸೂದನ್, ಕೆ.ವಿ.ಅಣ್ಣಪ್ಪ, ವಿ.ರಾಜು, ಹಿರಣಯ್ಯ, ರತ್ನಾಕರ ಶೆಣೈ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.