ADVERTISEMENT

ಮೈತ್ರಿ ಪಕ್ಷಗಳ ಒಮ್ಮತ; ಕಾರ್ಯಕರ್ತರಿಗೆ ಹುರುಪು: ಆರ್.ಎಂ.ಮಂಜುನಾಥ ಗೌಡ

3ರಂದು ಶಿವಮೊಗ್ಗಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ, ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಭಾಗಿ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 12:03 IST
Last Updated 2 ಏಪ್ರಿಲ್ 2019, 12:03 IST
ಮಂಜುನಾಥ ಗೌಡ
ಮಂಜುನಾಥ ಗೌಡ   

ಶಿವಮೊಗ್ಗ: ಉಪ ಚುನಾವಣೆಗೆ ಹೋಲಿಸಿದರೆ ಈ ಬಾರಿ ಮೈತ್ರಿ ಪಕ್ಷಗಳ ನಡುವೆ ಅಭೂತಪೂರ್ವ ಒಮ್ಮತ ಮೂಡಿದ್ದು, ಕಾರ್ಯಕರ್ತರಲ್ಲಿ ಹೊಸ ಹುರುಪು ತಂದಿದೆ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಬಣ್ಣಿಸಿದರು.

ಎರಡೂ ಪಕ್ಷಗಳ ಮುಖಂಡರು ಈಗಾಗಲೇ ಒಂದು ಸುತ್ತಿನ ಪ್ರಚಾರ ಮುಗಿಸಿದ್ದಾರೆ. ಅಭ್ಯರ್ಥಿ ಮಧು ಬಂಗಾರಪ್ಪ ಎರಡು ಸುತ್ತು ಪೂರೈಸಿದ್ದಾರೆ. ವ್ಯವಸ್ಥಿತ, ಸಂಘಟನಾತ್ಮಕ ತಂತ್ರಗಾರಿಕೆ ರೂಪಿಸಿಕೊಂಡು ಪ್ರಚಾರ ಕಾರ್ಯ ಕೈಗೊಳ್ಳಲಾಗಿದೆ. ಕ್ಷೇತ್ರದ ಜವಾಬ್ದಾರಿ ವಹಿಸಿಕೊಂಡಿರುವ ಸಚಿವ ಡಿ.ಕೆ.ಶಿವಕುಮಾರ್ ಈಗಾಗಲೇ ಮುಖಂಡರ ನಡುವೆ ಇದ್ದ ಸಣ್ಣಪುಟ್ಟ ವೈಮನಸ್ಸು ಸರಿಪಡಿಸಿದ್ದಾರೆ. ಹೆಚ್ಚಿನ ಮತಗಳ ಅಂತರದಿಂದ ಮೈತ್ರಿ ಅಭ್ಯರ್ಥಿ ಗೆಲ್ಲಿಸಲು ಹಲವು ಸೂಚನೆ ನೀಡಿದ್ದಾರೆ. ಏ.18ರಿಂದ 22ರವರೆಗೆ ಜಿಲ್ಲೆಯಲ್ಲೇ ಇದ್ದು ಮತ್ತಷ್ಟು ಕಾರ್ಯತಂತ್ರ ರೂಪಿಸಲಿದ್ದಾರೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪಶ್ಚಿಮಘಟ್ಟದ ಜನರಿಗೆ ಮಾರಕವಾದ ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ. ಬಗರುಹುಕುಂ ಸಾಗುವಳಿ ಮಾಡಿದ ಎಲ್ಲ ರೈತರಿಗೂ ಹಕ್ಕು ಪತ್ರ ನೀಡುವುದು. ಅರಣ್ಯವಾಸಿಗಳಮ್ಮು ಒಕ್ಕಲೆಬ್ಬಿಸದಂತೆ ಕಾಯ್ದೆಗೆ ತಿದ್ದುಪಡಿ, ಅಡಿಕೆ ನಿಷೇಧದ ವಿರುದ್ಧ ಹೋರಾಟ ಹಾಗೂ ಜಿಲ್ಲೆಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ವಿಷಯ ಇಟ್ಟುಕೊಂಡು ಮತಯಾಚಿಸಲಾಗುವುದು ಎಂದರು.

ADVERTISEMENT

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಮಾತನಾಡಿ, ಶಿವಮೊಗ್ಗ ನಗರದಲ್ಲಿ ಈಗಾಗಲೇ ಹಲವು ಸುತ್ತು ಸಭೆಗಳನ್ನು ನಡೆಸಲಾಗಿದೆ. ಎರಡೂ ಪಕ್ಷದ ಕಾರ್ಯಕರ್ತರ ವಾರ್ಡ್‌ವಾರು ಸಭೆ ನಡೆಸಲಾಗಿದೆ. ಎಲ್ಲ 35 ಮತಗಟ್ಟೆಗಳಲ್ಲೂ ಬಿರುಸಿನ ಪ್ರಚಾರ ಕೈಗೊಳ್ಳಲಾಗಿದೆ ಎಂದು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್‌ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್, ಕಾಂಗ್ರೆಸ್‌ ಮುಂಡರಾದ ಪಂಡಿತ್ ವಿಶ್ವನಾಥ್ ಸಿ.ಎಸ್.ಚಂದ್ರಭೂಪಾಲ್, ನಾಗರಾಜ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.