ADVERTISEMENT

‘ಜಗ ಸುತ್ತುವ ಮೋದಿ ಹಳ್ಳಿಗಳಿಗೆ ಹೋಗುವುದಿಲ್ಲ’

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2019, 19:33 IST
Last Updated 29 ಮಾರ್ಚ್ 2019, 19:33 IST
ಅಯೋಧ್ಯೆಯ ಬೀದಿಯೊಂದರಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಹಿಳೆಯರ ಜತೆ ಸಂವಾದ ನಡೆಸಿದರು
ಅಯೋಧ್ಯೆಯ ಬೀದಿಯೊಂದರಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಹಿಳೆಯರ ಜತೆ ಸಂವಾದ ನಡೆಸಿದರು   

ಅಯೋಧ್ಯೆ (ಉತ್ತರಪ್ರದೇಶ) : ಜಗತ್ತನ್ನು ಸುತ್ತುವ ಪ್ರಧಾನಿ ನರೇಂದ್ರ ಮೋದಿ ತನ್ನದೇ ಲೋಕಸಭಾ ಕ್ಷೇತ್ರವಾದ ವಾರಣಸಿಯ ಒಂದು ಹಳ್ಳಿಗೂ ಭೇಟಿ ನೀಡಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹರಿಹಾಯ್ದಿದ್ದಾರೆ.

ಅಯೋಧ್ಯೆಯಲ್ಲಿ ಶುಕ್ರವಾರ ಅವರು ನಡೆಸಿದ ‘ಬೀದಿ–ಬೀದಿಯಲ್ಲಿ ಸಭೆ’ಯ ವೇಳೆ ಈ ಮಾತು ಹೇಳಿದ್ದಾರೆ. ಅಯೋಧ್ಯೆಯಲ್ಲಿ ಪ್ರಚಾರ ಕಾರ್ಯ ನಡೆಸಿದ ಅವರು ಸ್ಥಳೀಯರ ಜತೆ ಮಾತುಕತೆ, ಸಂವಾದಗಳನ್ನು ನಡೆಸಿದರು.

‘ಈಚೆಗೆ ವಾರಾಣಸಿಗೆ ಹೋಗಿದ್ದೆ. ಐದು ವರ್ಷಗಳಲ್ಲಿ ಪ್ರಧಾನಿ ತನ್ನ ಕ್ಷೇತ್ರದ ಒಂದು ಹಳ್ಳಿಗೂ ಭೇಟಿ ನೀಡಿಲ್ಲ ಎಂದು ನನಗೆ ಆಗಲೇ ಗೊತ್ತಾಗಿದ್ದು. ಮೋದಿ ಅವರು ಅಮೆರಿಕ, ಜಪಾನ್ ಎಂದು ಜಗತ್ತಿನ ಎಲ್ಲಾ ರಾಷ್ಟ್ರಗಳಿಗೂ ಪ್ರವಾಸ ಹೋಗಿದ್ದಾರೆ. ಆದರೆ ವಾರಾಣಸಿಯ ಹಳ್ಳಿಗಳಿಗೆ ಭೇಟಿ ನೀಡಲು ಅವರ ಬಳಿ ಸಮಯವಿಲ್ಲ. ತಮ್ಮನ್ನು ಲೋಕಸಭೆಗೆ ಚುನಾಯಿಸಿ ಕಳಿಸಿದ ವಾರಾಣಸಿ ಕ್ಷೇತ್ರದ ಜನರನ್ನು ಮೋದಿ ಸಂಪೂರ್ಣ ಕಡೆಗಣಿಸಿದ್ದಾರೆ’ ಎಂದು ಪ್ರಿಯಾಂಕಾ ಆರೋಪಿಸಿದ್ದಾರೆ.

ADVERTISEMENT

‘ವಾರಾಣಸಿಯಲ್ಲಿ ಭಾರಿ ಅಭಿವೃದ್ಧಿ ಸಾಧಿಸಲಾಗಿದೆ ಎಂದು ಇವರು ಹೇಳಿಕೊಳ್ಳುತ್ತಾರೆ. ಆದರೆ ಯಾವ ಕೆಲಸವೂ ಆಗಿಲ್ಲ. ವಾರಾಣಸಿಯಲ್ಲಿ 150 ಕಿ.ಮೀ. ಉದ್ದದ ರಸ್ತೆಗೆ ಯುಪಿಎ ಸರ್ಕಾರ ಅನುಮೋದನೆ ನೀಡಿತ್ತು. ಆದರೆ ಎನ್‌ಡಿಎ ಸರ್ಕಾರ ಕೇವಲ 15 ಕಿ.ಮೀ. ರಸ್ತೆ ನಿರ್ಮಿಸಿದೆ. ವಾರಾಣಸಿ ನಗರದಿಂದ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ಬರೀ ಗುಂಡಿಗಳೇ ಇವೆ. ಇದು ಅಭಿವೃದ್ಧಿಯೇ’ ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ.

‘ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ ಒದಗಿಸುವ ಉದ್ದೇಶದಿಂದ ನರೇಗಾ ಯೋಜನೆ ಜಾರಿಗೆ ತರಲಾಗಿತ್ತು. ಆದರೆ ಮೋದಿ ಸರ್ಕಾರ ಈ ಯೋಜನೆಯನ್ನು ರದ್ದುಪಡಿಸಲು ಮುಂದಾಗಿದೆ. ಆರು ತಿಂಗಳಿಂದ ಜನರಿಗೆ ಹಣವೇ ತಲುಪಿಲ್ಲ. ಎಲ್ಲಾ ಹಣ ಗುತ್ತಿಗೆದಾರರಿಗೆ ಹೋಗುತ್ತಿದೆ. ಮೋದಿ ಸಿರಿವಂತರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಬಡವರು ಮತ್ತು ರೈತರನ್ನು ಕಡೆಗಣಿಸುತ್ತಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.