ಮುಂಬೈ: ‘ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರಾವಧಿಯು ವಿನಾಶಕಾರಿಯಾಗಿತ್ತು’ ಎಂದು ಟೀಕಿಸಿರುವ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರು ‘ರಾಹುಲ್ ಗಾಂಧಿಗೆ ಒಂದು ಅವಕಾಶ ಕೊಡಬೇಕು’ ಎಂದಿದ್ದಾರೆ.
ಇಲ್ಲಿಯ ಶಿವಾಜಿ ಪಾರ್ಕ್ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ‘ನಾವು ಮೋದಿಗೆ ಅವಕಾಶ ಕೊಟ್ಟೆವು. ಅವರು ಅತ್ಯಂತ ಅಪಾಯಕಾರಿ ಪ್ರಧಾನಿಯಾದರು. ಒಮ್ಮೆ ರಾಹುಲ್ ಪ್ರಧಾನಿಯಾಗಲಿ. ದೇಶದ ಅದೃಷ್ಟ ಚೆನ್ನಾಗಿದ್ದರೆ ಅವರು (ರಾಹುಲ್) ಕೆಲವು ಒಳ್ಳೆಯ ಕೆಲಸಗಳನ್ನು ಮಾಡಬಹುದು. ನಮಗೀಗ ಮೋದಿಮುಕ್ತ ಭಾರತ ಬೇಕಾಗಿದೆ’ ಎಂದರು.
ಹಿಂದೆ ಮೋದಿಯ ಬೆಂಬಲಿಗರಾಗಿದ್ದು, ಗುಜರಾತ್ ಮಾದರಿ ಅಭಿವೃದ್ಧಿಯನ್ನು ಸಮರ್ಥಿಸಿಕೊಂಡಿದ್ದ ರಾಜ್, ‘ನಾನು ವಿವಿಧೆಡೆ 10 ರ್ಯಾಲಿಗಳನ್ನು ಆಯೋಜಿಸಿ, ಮೋದಿ ಅಧಿಕಾರಕ್ಕೆ ಬರುವುದಕ್ಕೂ ಮೊದಲು ಜನರಿಗೆ ಏನೇನು ಭರವಸೆಗಳನ್ನು ಕೊಟ್ಟಿದ್ದರು ಮತ್ತು ಅಧಿಕಾರಕ್ಕೆ ಬಂದ ಬಳಿಕ ಏನು ಮಾಡಿದ್ದಾರೆ ಎಂಬುದನ್ನು ತಿಳಿಸಲಿದ್ದೇನೆ’ ಎಂದರು.
‘ಅಮರಾವತಿಯ ಹರಿಸಲ್ ಗ್ರಾಮವನ್ನು ದೇಶದ ಮೊದಲ ಡಿಜಿಟಲ್ ಗ್ರಾಮ ಎಂದು ಘೋಷಿಸಲಾಗಿದೆ. ಆದರೆ ಅಲ್ಲಿ ಇಂಟರ್ನೆಟ್, ಎಟಿಎಂ, ಸ್ವೈಪಿಂಗ್ ಯಂತ್ರ ಯಾವುದೂ ಇಲ್ಲ’ ಎಂದು ಆರೋಪಿಸಿದ ರಾಜ್ ಆ ಗ್ರಾಮವನ್ನು ಕುರಿತ ವಿಡಿಯೊ ಒಂದನ್ನು ರ್ಯಾಲಿಯಲ್ಲಿ ಪ್ರದರ್ಶಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.