ADVERTISEMENT

ರಾಜಕೀಯಕ್ಕೆ ಸೇನೆ ಬಳಸಲು ಬಿಡಬೇಡಿ: ಇನ್ನೂ 200 ಸೇನಾಧಿಕಾರಿಗಳ ಸಹಿ

ಕಲ್ಯಾಣ್‌ ರೇ
Published 26 ಏಪ್ರಿಲ್ 2019, 2:52 IST
Last Updated 26 ಏಪ್ರಿಲ್ 2019, 2:52 IST
ರಾಮನಾಥ ಕೋವಿಂದ್
ರಾಮನಾಥ ಕೋವಿಂದ್   

ನವದೆಹಲಿ:ರಾಜಕೀಯ ಪಕ್ಷಗಳು ಚುನಾವಣಾ ಉದ್ದೇಶಕ್ಕೆ ಸೇನೆಯನ್ನು ಬಳಸಿಕೊಳ್ಳುದಂತೆ ನಿರ್ದೇಶನ ನೀಡಿ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ನಿವೃತ್ತ ಸೇನಾಧಿಕಾರಿಗಳು ಬರೆದಿದ್ದ ಪತ್ರಕ್ಕೆ ಇನ್ನೂ 200 ನಿವೃತ್ತ ಸೇನಾಧಿಕಾರಿಗಳು ತಮ್ಮ ಸಹಿ ಸೇರಿಸಿದ್ದಾರೆ.

ಭಾರತದ ಸೇನೆಯ ಮೂರೂ ಪಡೆಗಳ ಮಹಾದಂಡನಾಯಕರಾಗಿರುವ ರಾಷ್ಟ್ರಪತಿಗೆ ತಿಂಗಳ ಹಿಂದೆ 156 ನಿವೃತ್ತ ಸೇನಾಧಿಕಾರಿಗಳು ಪತ್ರ ಬರೆದಿದ್ದರು.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸೇನೆಯನ್ನು ‘ಮೋದಿ ಅವರ ಸೇನೆ’ ಎಂದು ಕರೆದಿದ್ದರು. ಬಾಲಾಕೋಟ್ ವಾಯುದಾಳಿಯ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ ಕೇಳಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಈ ವಿಚಾರಗಳನ್ನು ಪದೇ ಪದೇ ಪ್ರಸ್ತಾಪಿಸಿದ್ದಾರೆ. ಇದರಿಂದ ಸೇನೆಗೆ ಧಕ್ಕೆಯಾಗುತ್ತದೆ. ಹೀಗಾಗಿ ರಾಜಕೀಯ ಉದ್ದೇಶಕ್ಕೆ ಸೇನೆಯ ವಿಚಾರಗಳನ್ನು ಬಳಸಿಕೊಳ್ಳದಂತೆ ನಿರ್ದೇಶನ ನೀಡಿ ಎಂದು ಪತ್ರದಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು.

ADVERTISEMENT

ಅಂತಹ ಯಾವುದೇ ಪತ್ರ ನಮಗೆ ಬಂದಿಲ್ಲ ಎಂದು ರಾಷ್ಟ್ರಪತಿ ಭವನದ ಅಧಿಕಾರಿಗಳು ತಿಳಿಸಿದ್ದರು. ಆದರೆ ಇ–ಮೇಲ್ ಮೂಲಕ ಪತ್ರ ಬಂದಿದೆಯೇ ಎಂಬ ಪ್ರಶ್ನೆಗೆ ಅವರು ಉತ್ತರಿಸಿರಲಿಲ್ಲ. ಇದು ವಿವಾದಕ್ಕೆ ಕಾರಣವಾಗಿತ್ತು.

ಪತ್ರದಲ್ಲಿ ಹೆಸರಿಸಲಾಗಿರುವ ಹಲವು ನಿವೃತ್ತ ಸೇನಾಧಿಕಾರಿಗಳು ತಾವು ಸಹಿ ಮಾಡಿಯೇ ಇಲ್ಲ ಎಂದು ಹೇಳಿದ್ದರು. ಆದರೆ ನಂತರ ಸಹಿ ಮಾಡಿದ್ದಾಗಿ ಒಪ್ಪಿಕೊಂಡಿದ್ದರು. ಈಗ ಇನ್ನೂ 200 ಸೇನಾಧಿಕಾರಿಗಳು ಸಹಿ ಮಾಡಿರುವುದರಿಂದ ಪತ್ರಕ್ಕೆ ಇನ್ನಷ್ಟು ಮಹತ್ವ ಬಂದಿದೆ.

ಈ ಪತ್ರವನ್ನು ಆಧರಿಸಿಯೇ ವಿರೋಧ ಪಕ್ಷಗಳು ಮೋದಿ, ಶಾ ಮತ್ತು ಯೋಗಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದವು. ಅದರೆ ಆಯೋಗವು ಯೋಗಿ ವಿರುದ್ಧ ಮಾತ್ರ ಕ್ರಮ ತೆಗೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.