ADVERTISEMENT

ಬೆಳಗಾವಿ: ಮತದಾನ ಜಾಗೃತಿಗೆ ವಾಕಥಾನ್

ಚುನಾವಣಾ ಅಕ್ರಮಗಳ ಮಾಹಿತಿ ನೀಡಲು ಮನವಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 12:51 IST
Last Updated 5 ಏಪ್ರಿಲ್ 2019, 12:51 IST
ಬೆಳಗಾವಿಯಲ್ಲಿ ಮತದಾನ ಜಾಗೃತಿಗಾಗಿ ಶುಕ್ರವಾರ ಆಯೋಜಿಸಿದ್ದ ವಾಕಥಾನ್‌ನಲ್ಲಿ ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು
ಬೆಳಗಾವಿಯಲ್ಲಿ ಮತದಾನ ಜಾಗೃತಿಗಾಗಿ ಶುಕ್ರವಾರ ಆಯೋಜಿಸಿದ್ದ ವಾಕಥಾನ್‌ನಲ್ಲಿ ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು   

ಬೆಳಗಾವಿ: ‘ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೇ ನೈತಿಕ ಮತದಾನ ಮಾಡಬೇಕು. ಚುನಾವಣಾ ಅಕ್ರಮದ ಬಗ್ಗೆ ಸಿ–ವಿಜಿಲ್ ಮೊಬೈಲ್ ಆ್ಯಪ್‌ನಲ್ಲಿ ಮಾಹಿತಿ ನೀಡಬೇಕು’ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾ ಪಂಚಾಯ್ತಿ ಸಿಇಒ ಕೆ.ವಿ. ರಾಜೇಂದ್ರ ತಿಳಿಸಿದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಜಾಗೃತಿಗಾಗಿ ಜಿಲ್ಲಾ ಸ್ವೀಪ್ ಸಮಿತಿಯು ಸಿಪಿಇಡಿ ಮೈದಾನದಿಂದ ಶುಕ್ರವಾರ ಹಮ್ಮಿಕೊಂಡಿದ್ದ ವಾಕಥಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಮಾಹಿತಿ ನೀಡಿದವರ ಹೆಸರನ್ನು ಗೋಪ್ಯವಾಗಿಡಲಾಗುವುದು. ದೂರು ಸಲ್ಲಿಸಿದ 100 ನಿಮಿಷಗಳ ಒಳಗಾಗಿ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ADVERTISEMENT

ಇವಿಎಂ ಮತ್ತು ವಿವಿಪ್ಯಾಟ್ ಯಂತ್ರಗಳ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು.

ವೆಂಗುರ್ಲಾ ರಸ್ತೆ, ಹನುಮಾನ ನಗರ, ಜಾಧವ ನಗರದಲ್ಲಿ ನಡೆದ ವಾಕಥಾನ್‌ನಲ್ಲಿ 600 ಮಂದಿ ಭಾಗವಹಿಸಿದ್ದರು.

ದಂಡು ಮಂಡಳಿ ಸಿಇಒ ದಿವ್ಯಾ ಹೊಸೂರ, ಪ್ರೊಬೆಷನರಿ ಐಎಎಸ್ ಅಧಿಕಾರಿ ಭಂವರಸಿಂಗ್ ಮೀನಾ, ಜಿಲ್ಲಾ ಸ್ವೀಪ್ ಐಕಾನ್ ಮಧು ಮರಾಠೆ, ಜಿಲ್ಲಾ ಪಂಚಾಯ್ತಿ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ, ‘ಬೆಳಗಾವಿ ವೋಟ್ಸ್‌ 100%’ ತಂಡದ ಚೈತನ್ಯ ಕುಲಕರ್ಣಿ, ಸಚಿನ್ ಸಬ್ನಿಸ್, ಮಯೂರ ಶಿವಲಕರ, ಕಿರಣ ನಿಪ್ಪಾಣಿಕರ, ಮುಕುಲ್ ಚೌಧರಿ, ಪ್ರವೀಣ ಪವಾರ, ಕೀರ್ತಿ ಟೆಂಬೆ, ಆನಂದ ಬುಕ್ಕೆಬಾಗ, ವಿಕ್ರಾಂತ ಕಾಲಕುಂದ್ರಿಕರ, ಡಿಎಚ್‌ಒ ಡಾ.ಅಪ್ಪಸಾಹೇಬ ನರಟ್ಟಿ, ನಗರಪಾಲಿಕೆ ಆರೋಗ್ಯ ಅಧಿಕಾರಿ ಡಾ.ಶಶಿಧರ ನಾಡಗೌಡ, ಸಹಾಯಕ ಸ್ವೀಪ್ ಅಧಿಕಾರಿ ರವಿ ಭಜಂತ್ರಿ, ಕ್ರೀಡಾ ಇಲಾಖೆ ಉಪನಿರ್ದೇಶಕ ಸಿ.ಬಿ. ರಂಗಯ್ಯ, ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ನಾಮದೇವ ಬಿಲಕರ ಭಾಗವಹಿಸಿದ್ದರು.

ವಿವಿಧ ಕಾರ್ಯಕ್ರಮ:

ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಶಿಕ್ಷಣ ಕಾಲೇಜಿನ ಎನ್‌ಎಸ್‌ಎಸ್‌ ಘಟಕ ಹಾಗೂ ಇತಿಹಾಸ ಸಂಘದಿಂದ ಅಂತರ ಬಿ.ಇಡಿ. ಕಾಲೇಜುಗಳ ಪ್ರಶಿಕ್ಷಣಾರ್ಥಿಗಳಿಗೆ ‘ಪ್ರಜಾಪ್ರಭುತ್ವ ಯಶಸ್ಸಿಗೆ ಕಡ್ಡಾಯ ಮತದಾನದ ಅಗತ್ಯ’ ವಿಷಯ ಕುರಿತು ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು.

ಪ್ರಾಚಾರ್ಯ ಎ.ಎಲ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ರವಿ ಭಜಂತ್ರಿ, ನೆಹರೂ ಯುವ ಕೇಂದ್ರದ ನಿವೃತ್ತ ಸಮನ್ವಯ ಅಧಿಕಾರಿ ಎಸ್.ಯು. ಜಮಾದಾರ‌, ಪ್ರೊ.ಎಸ್.ಎಸ್. ಬಡಿಗೇರ, ಬಿ.ಜಿ. ಧಾರವಾಡ, ಎಸ್.ಎ. ನರಸಗೌಡ, ಪಿ.ಪಿ. ದೇಶಪಾಂಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.