ಇಫ್ತಾರ್ ಕೂಟದಲ್ಲಿ ಬಾಲಿವುಡ್ನ ಸೂಪರ್ಸ್ಟಾರ್ಗಳಾದ ಸಲ್ಮಾನ್ ಹಾಗೂ ಶಾರುಕ್ ಖಾನ್ ಇಬ್ಬರೂ ಆಲಂಗಿಸುವ ಮೂಲಕ ತಮ್ಮ ದೀರ್ಘಕಾಲದ ಮನಸ್ತಾಪಕ್ಕೆ ತೆರೆ ಎಳೆದಿದ್ದಾರೆ. 2008ರಲ್ಲಿ ನಡೆದ ಕತ್ರಿನಾ ಕೈಫ್ ಜನ್ಮದಿನದ ಪಾರ್ಟಿಯಲ್ಲಿ ಇಬ್ಬರ ನಡುವೆ ಜಗಳವಾಗಿತ್ತು.
ಅಂದಿನಿಂದ ಈ ಇಬ್ಬರು ನಟರು ಒಟ್ಟಿಗೆ ಸಾರ್ವಜನಿಕ ವೇದಿಕೆಯನ್ನು ಕಾಣಿಸಿಕೊಂಡಿರಲಿಲ್ಲ. ಆದರೆ ಈ ರಂಜಾನ್ ಮಾಸ ಇಬ್ಬರ ನಡುವಿನ ದ್ವೇಷವನ್ನು ಸರಿಸಿ ಹತ್ತಿರ ತಂದಿದೆ ಎಂದು ವಿಶ್ವೇಷಿಸಲಾಗುತ್ತಿದೆ.
ಕಾಂಗ್ರೆಸ್ ನಾಯಕ ಬಾಬಾ ಸಿದ್ಧಿಕಿ ಅವರು ಮುಂಬೈನ ಬಾನ್ರಾ ತಾಜ್ ಲ್ಯಾಂಡ್ಸ್ ಎಂಡ್ ಪಂಚತಾರಾ ಹೊಟೇಲಿನಲ್ಲಿ ಆಯೋಜಿಸಿದ್ದ ಇಫ್ತಾರ್ ಕೂಟಕ್ಕೆ ಸಲ್ಮಾನ್ ಹಾಗೂ ಶಾರುಕ್ ಖಾನ್ ಇಬ್ಬರನ್ನೂ ಆಹ್ವಾನಿಸಲಾಗಿತ್ತು.
ಬಹಳ ವರ್ಷಗಳ ನಂತರ ಎದರು ಬದುರಾದ ಇಬ್ಬರು ಸ್ಟಾರ್ಗಳನ್ನು ಪರಸ್ಪರ ಹಸ್ತಲಾಘವ ಮಾಡಿಕೊಂಡು ನಂತರ ಆಲಂಗಿಸಲು ಸಿದ್ಧಿಕಿ ಅವರೇ ಸೂಚಿಸಿದರು ಎಂದು ಮೂಲಗಳು ಹೇಳಿವೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಶಾರುಕ್ ಖಾನ್ ಅವರ ತೋಳಿನೊಳಗೆ ತಮ್ಮ ತೋಳನ್ನು ಸಿಕ್ಕಿಸಿಕೊಂಡಿದ್ದರಂತೆ. ಒಟ್ಟಿಗೆ ಕುಳಿತ `ಕರಣ್-ಅರ್ಜುನ್' ಜೋಡಿ ಪರಸ್ಪರ ತಬ್ಬಿಕೊಂಡು ದ್ವೇಷವನ್ನು ಮರೆತರು ಎಂಬುದು ಇಬ್ಬರ ಅಭಿಮಾನಿಗಳಿಗೆ ಖುಷಿಯ ವಿಷಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.