ADVERTISEMENT

ಕಳ್ಳನ ಕಾಮಿಡಿ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2012, 19:30 IST
Last Updated 11 ಅಕ್ಟೋಬರ್ 2012, 19:30 IST

`ಕಳ್ಳತನ ಮಾಡುವ ನಮ್ಮ ನಾಯಕ ಪ್ರೇಕ್ಷಕರ ಮನಸ್ಸು ಕದಿಯುವುದು ನಿಶ್ಚಿತ~ ಎಂದರು ನಿರ್ದೇಶಕ ಪ್ರದೀಪ್ ರಾಜ್. ಅವರು ಈ ಮೊದಲು `ಕಿರಾತಕ~ ಚಿತ್ರ ನಿರ್ದೇಶಿಸಿದ್ದವರು. ಇದೀಗ `ಮಿಸ್ಟರ್ 420~ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ಸಂಭಾಷಣೆಕಾರ ಬಿ.ಎ.ಮಧು ಅವರೊಡಗೂಡಿ ಕತೆಯನ್ನೂ ರಚಿಸಿದ್ದಾರೆ.

`ಮಿಸ್ಟರ್ 420~ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಚಿತ್ರೀಕರಣದ ಅನುಭವಗಳನ್ನು ಮೆಲುಕು ಹಾಕಿದ ಅವರು ನಾಯಕ ಗಣೇಶ್ ಮತ್ತು ರಂಗಾಯಣ ರಘು ಜೋಡಿ ಜನರಿಗೆ ಮೋಡಿ ಮಾಡುವುದು ಖಂಡಿತ ಎಂದರು.

`ಚಿತ್ರಕ್ಕಾಗಿ ಬೆಂಗಳೂರಿನಲ್ಲಿ 15 ದಿನ, ಮೈಸೂರಿನಲ್ಲಿ 25 ದಿನ ಚಿತ್ರೀಕರಣ ಮಾಡಲಾಗಿದೆ. ಚಿತ್ರದ ಕತೆಗೆ 70 ದಿನಗಳ ಚಿತ್ರೀಕರಣದ ಅಗತ್ಯ ಇತ್ತು. ಆದರೆ ಸೂಕ್ತ ಯೋಜನೆ ಮತ್ತು ತಂಡದ ಸಹಕಾರದಿಂದ 40 ದಿನಗಳಲ್ಲಿ ಚಿತ್ರೀಕರಣ ಮುಕ್ತಾಯವಾಗಿದೆ.
 
ಚಿತ್ರದಲ್ಲಿ ನಾಯಕ ಹಳ್ಳಿಯ ಹುಡುಗ. ಅವನು ನಗರಕ್ಕೆ ಬಂದು ಕಳ್ಳತನ ಮಾಡಲು ಆರಂಭಿಸುತ್ತಾನೆ. ಪ್ರೀತಿಯಲ್ಲಿ ಸಿಲುಕಿದ ನಂತರವೂ ಅವನ ಕಳ್ಳತನ ಮುಂದುವರಿಯುತ್ತದೆ. ಅವನಿಗೆ ಜೊತೆಯಾಗಿ ಚಿಕ್ಕಪ್ಪ ರಂಗಾಯಣ ರಘು ಇರುತ್ತಾರೆ~ ಎಂದು ವಿವರ ನೀಡಿದರು.

ನಾಗೇಂದ್ರ ಪ್ರಸಾದ್ ಬರೆದಿರುವ `ಲೋಳಲೊಟ್ಟೆ...~ ಹಾಡು ಅವರಿಗೆ ತುಂಬಾ ಇಷ್ಟವಾಗಿದೆಯಂತೆ. ಹರಿಕೃಷ್ಣ ಚಿತ್ರದ ಸಂಗೀತ ನಿರ್ದೇಶಕರು.

`ನನಗೆ ಮತ್ತು ರಘು ಅವರಿಗೆ 420ರಲ್ಲಿ ಸಮಪಾಲಿದೆ. ಅದರಿಂದ ನಾನು 210 ಅಷ್ಟೇ. ಚಿತ್ರದುದ್ದಕ್ಕೂ ಹಾಸ್ಯವೇ ತುಂಬಿಕೊಂಡಿದೆ. ಅಲ್ಲಿ ಬೇರೆ ಭಾವನೆಗಳಿಗೆ ಅವಕಾಶ ಇಲ್ಲ. ಪುಂಖಾನುಪುಂಖವಾಗಿ ಕಾಮಿಡಿ ಘಟನೆಗಳು ನಡೆಯುತ್ತಲೇ ಹೋಗುತ್ತವೆ~ ಎಂದ ಗಣೇಶ್‌ಗೆ ಚಿತ್ರದ ಸಂಭಾಷಣೆ ಆಪ್ತ ಎನಿಸಿದೆ.

ತಮಿಳಿನ `ಪಯ್ಯಾ~ ಸಿನಿಮಾವನ್ನು ರೀಮೇಕ್ ಮಾಡಲು ಹೊರಟ ನಿರ್ಮಾಪಕ ಸಂದೇಶ ನಾಗರಾಜು ಅವರಿಗೆ ಬಿ.ಎ.ಮಧು ಹೇಳಿದ ಕತೆ ಇಷ್ಟವಾಯಿತಂತೆ. ಅದರಿಂದ `ಮಿಸ್ಟರ್ 420~ ನಿರ್ಮಿಸಲು ಮುಂದಾದ ಅವರು ಚಿತ್ರತಂಡದ ಕೆಲಸದಿಂದ ಸಂತೃಪ್ತರಾಗಿದ್ದಾರೆ. ಅವರಿಗೆ ನಾಯಕ ಗಣೇಶ್- ನಾಯಕಿ ಪ್ರಣೀತಾ ಜೋಡಿ ಜನರಿಗೆ ಇಷ್ಟವಾಗುವ ಭರವಸೆ ಇದೆ.                                              

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.