ADVERTISEMENT

ಕೌರವ ಕಾಂಡ–2

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 19:59 IST
Last Updated 5 ಸೆಪ್ಟೆಂಬರ್ 2013, 19:59 IST

ಟ ಬಿ.ಸಿ. ಪಾಟೀಲ್ ‘ಕೌರವ’ನ ಅವತಾರಿಯಾಗಿ ದಶಕವೇ ದಾಟಿದ್ದರೂ ಆ ಗುಂಗಿನಿಂದ ಇನ್ನೂ ಹೊರಬಂದಿಲ್ಲ. ಮನೆ, ಶಿಕ್ಷಣ ಸಂಸ್ಥೆ ಮತ್ತು ಅವರು ನಡೆಸುವ ಪತ್ರಿಕೆಗೂ ‘ಕೌರವ’ನ ಹೆಸರಿದೆ. ಪ್ರಸ್ತುತ ಸಕ್ರಿಯ ರಾಜಕಾರಣದಿಂದ ಒಂದು ಅಂತರ ಕಾದುಕೊಂಡಿರುವ ಅವರು ಚಿತ್ರರಂಗದಲ್ಲಿ ಮರಳಿ ತೊಡಗಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ– ಅದೂ ಕೌರವನ ಮೂಲಕವೇ.

ಪಾಟೀಲರು ಇದೀಗ ಕೌರವ ಭಾಗ–2 ಚಿತ್ರ ನಿರ್ಮಾಣದ ಸಿದ್ಧತೆಯಲ್ಲಿದ್ದಾರೆ. ಛಲದೊಳ್ ದುರ್ಯೋಧನನಿಗೆ ಕಥೆ ಕೂಡಿಸುವ ಜವಾಬ್ದಾರಿಯನ್ನು ನಿರ್ದೇಶಕ ಎಸ್. ಮಹೇಂದರ್ ಹೊತ್ತುಕೊಂಡಿದ್ದಾರೆ. ಕಥೆ ಸಿದ್ಧಗೊಂಡ ತಕ್ಷಣವೇ ಚಿತ್ರೀಕರಣ ಆರಂಭ. ‘1993ರಲ್ಲಿ ‘ನಿಷ್ಕರ್ಷ’ ಸಿನಿಮಾದಿಂದ ಚಿತ್ರರಂಗದ ಜೊತೆ ನಂಟು ಬೆಸೆದುಕೊಂಡೆ.

2003ರಲ್ಲಿ ರಾಜಕಾರಣ. 2013ರ ಮತ್ತೆ ಸಕ್ರಿಯವಾಗಿ ಚಿತ್ರರಂಗದಲ್ಲಿ ತೊಡಗುವೆ’ – ಹೀಗೆ, ದಶಕದಿಂದ ದಶಕಕ್ಕೆ ಬದಲಾಗುತ್ತಿರುವ ತಮ್ಮ ಬದುಕಿನ ಕುರಿತು ಅವರು ಹೇಳಿಕೊಂಡರು. ಚಿತ್ರರಂಗದಲ್ಲಿ ಅವರು ಕಳೆದುಕೊಂಡಿದ್ದು ಹಣವನ್ನಾದರೆ ಪಡೆದುಕೊಂಡಿದ್ದು ಹೆಸರನ್ನಂತೆ. ಸದ್ಯ ‘ಪುಂಗಿದಾಸ’ ಮತ್ತು ‘ಒಂದ್ ಚಾನ್ಸ್ ಕೊಡಿ’ ಚಿತ್ರಗಳಲ್ಲಿ ಪಾಟೀಲರು ನಟಿಸುತ್ತಿದ್ದಾರೆ.

‘ನಾನು ಎಲ್ಲಿ ಹೋದರೂ ಜನ ತಮ್ಮ ರಾಜಕೀಯ ಬದುಕಿನ ಬದಲು ಸಿನಿಮಾ ಏಕೆ ಮಾಡುತ್ತಿಲ್ಲ ಎಂದೇ ಕೇಳುತ್ತಾರೆ. ಸಿನಿಮಾ ನನಗೆ ಎಲ್ಲ ಸ್ಥಾನಮಾನಗಳನ್ನು ತಂದು ಕೊಟ್ಟಿದೆ. ಇಲ್ಲಿ ಏರಿಳಿತಗಳನ್ನೂ ಕಂಡಿದ್ದೇನೆ’ ಎಂದವರು ಭಾವುಕತೆಯಿಂದ ಹೇಳಿಕೊಂಡರು. ಪಾಟೀಲರು ಖಳನಾಯಕ ಪಟ್ಟ ಕಳಚಿ ನಾಯಕನಾಗಿದ್ದು ಕೌರವ ಚಿತ್ರದಿಂದಲೇ. ಕೌರವನ ಹೆಸರು ಜನರಲ್ಲಿ ಋಣಾತ್ಮಕವಾಗಿದ್ದರೂ ಇವರಿಗೆ ಮಾತ್ರ ಅದು ಸಕಾರಾತ್ಮಕ ಹೆಸರಂತೆ. ಆ ಕಾರಣದಿಂದಲೇ ಇದೀಗ ಅವರು ‘ಕೌರವ–2’ರ ಸಿದ್ಧತೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT