ತ್ರಿಕೋನ ಪ್ರೇಮಕಥೆ ಹೊಂದಿರುವ ‘ಯಾರ್ ಯಾರೋ ಗೋರಿ ಮೇಲೆ’ ಚಿತ್ರ ಈ ವಾರ(ಮೇ 25ರಂದು) ತೆರೆಕಾಣುತ್ತಿದೆ. ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಅಂಶವಿರುವ ಈ ಚಿತ್ರದ ನಿರ್ದೇಶಕರು ರಾಘುಚಂದ್. ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು.
ಕೇವಲ ಪ್ರೀತಿ ಬಗ್ಗೆ ಮಾತ್ರ ಚಿತ್ರದಲ್ಲಿ ಹೇಳಿಲ್ಲವಂತೆ. ನಿಸರ್ಗದ ಬಗ್ಗೆಯೂ ಹೇಳಲಾಗಿದೆ. ಹೊಸ ಹುಡುಗರ ಪ್ರಯತ್ನಕ್ಕೆ ಜನರು ಬೆಂಬಲ ನೀಡಲಿದ್ದಾರೆ ಎಂಬುದು ಚಿತ್ರತಂಡದ ವಿಶ್ವಾಸ.
ಚಿತ್ರಕ್ಕೆ ಬಂಡವಾಳ ಹೂಡಿರುವ ಎ. ಪುಟ್ಟರಾಜು ಈ ಚಿತ್ರದ ನಾಯಕ ನಟರೂ ಹೌದು. ‘ಮನುಷ್ಯ ಜೀವನದಲ್ಲಿ ಆಸೆಪಡುವುದು ಸಹಜ. ಅದನ್ನು ಹೇಗೆ ಈಡೇರಿಸಿಕೊಳ್ಳುತ್ತಾನೆ ಎಂಬುದನ್ನು ಚಿತ್ರದಲ್ಲಿ ತೋರಿಸಿದ್ದೇವೆ’ ಎಂದರು.
ಮತ್ತೊಬ್ಬ ನಾಯಕ ನಟ ಅಭಿ ಅವರಿಗೆ ಇದು ಎರಡನೇ ಸಿನಿಮಾ. ‘ಹಳೆಯ ಗೋರಿ ತೆಗೆದು ಮತ್ತೆ ಅದೇ ಗೋರಿಗೆ ಇನ್ನೊಬ್ಬರನ್ನು ಹೂಳುತ್ತೇವೆ. ಅದನ್ನು ಏಕೆ ಮಾಡುತ್ತೇವೆ ಎನ್ನುವುದನ್ನು ಚಿತ್ರ ಕಟ್ಟಿಕೊಡುತ್ತದೆ. ಪ್ರೀತಿ ಮತ್ತು ಸ್ನೇಹದ ಮಹತ್ವವೂ ಇದೆ. ಯುವಜನರನ್ನು ಸೆಳೆಯುವ ಜೊತೆಗೆ ಕುಟುಂಬದ ಎಲ್ಲರೂ ಒಟ್ಟಾಗಿ ಕುಳಿತು ನೋಡುವ ಚಿತ್ರ ಇದು’ ಎಂದರು. ನಾಯಕಿ ವರ್ಷಾಗೆ ಇದು ಪ್ರಥಮ ಚಿತ್ರ. ‘ನನ್ನದು ಬಬ್ಲಿ ಹುಡುಗಿಯ ಪಾತ್ರ. ಕಥೆ ಕೇಳಿದ ತಕ್ಷಣ ಒಪ್ಪಿಕೊಂಡೆ. ಹೊಸಬರಿಗೆ ಜನರು ಪ್ರೋತ್ಸಾಹ ನೀಡಬೇಕು’ ಎಂದು ಕೋರಿದರು.
ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಲೋಕಿ ಸಂಗೀತ ಸಂಯೋಜಿಸಿದ್ದಾರೆ. ಹಿನ್ನೆಲೆ ಸಂಗೀತ ವಿನು ಮನಸು ಅವರದ್ದು. ಪ್ರದೀಪ್ ಗಾಂಧಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಎಪ್ಪತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ತೆರೆಕಾಣುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.