ADVERTISEMENT

`ಡವ್' ಜನ್ಮದಿನ!

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 19:40 IST
Last Updated 13 ಡಿಸೆಂಬರ್ 2012, 19:40 IST

`ನಿರ್ಮಾಪಕರಿಗೆ ಐವತ್ತನೇ ಜನ್ಮದಿನದ ಸಂಭ್ರಮವಾದರೆ, ನನಗೆ ಚಿತ್ರರಂಗದಲ್ಲಿ ಇಂದು ಜನಿಸಿದ ಸಂಭ್ರಮ' ಎಂದು ನಕ್ಕರು ನಟ ಅನೂಪ್ ಗೋವಿಂದ್. ನಿರ್ಮಾಪಕ ಬಿ.ಕೆ. ಶ್ರೀನಿವಾಸ್‌ಗೆ ಅಂದು ಐವತ್ತನೇ ಹುಟ್ಟುಹಬ್ಬದ ದಿನ. ಅದನ್ನು ಸ್ಮರಣೀಯವಾಗಿರಿಸಿಕೊಳ್ಳಲು ಅಂದೇ ತಮ್ಮ ನಿರ್ಮಾಣದ ಹೊಸ ಚಿತ್ರ `ಡವ್'ನ ಮುಹೂರ್ತ ನೆರವೇರಿಸಿದರು. ರಾಜಕಾರಣಿಗಳು, ಚಿತ್ರರಂಗದ ಹಿರಿಯ ನಟರು, ನಿರ್ದೇಶಕರು, ನಿರ್ಮಾಪಕರ ದಂಡು ಅಲ್ಲಿತ್ತು. ಹೀಗಾಗಿ ಮಾತೂ ಜೋರಾಗಿತ್ತು. ತಮ್ಮ ಬದುಕಿನ ಹಾದಿಯನ್ನು ಎಳೆ ಎಳೆಯಾಗಿ ಶ್ರೀನಿವಾಸ್ ಹಂಚಿಕೊಂಡರು.

ಚಿತ್ರಕ್ಕಾಗಿ ನಾಲ್ಕೈದು ತಿಂಗಳಿಂದ ತರಬೇತಿ ಪಡೆಯುತ್ತಿರುವ ಅನೂಪ್, ಈಗ ದಿನವೆಂದರೆ ಸಿನಿಮಾ ಎಂದೆನಿಸುವಂತೆ ಅದರಲ್ಲಿ ಮುಳುಗಿದ್ದೇನೆ ಎಂದರು. ತಂದೆ ಸಾ.ರಾ. ಗೋವಿಂದು ತಮ್ಮ ಮೇಲಿಟ್ಟಿರುವ ನಿರೀಕ್ಷೆಗಳನ್ನು ಹುಸಿಗೊಳಿಸುವುದಿಲ್ಲ ಎಂಬ ಭರವಸೆ ನೀಡಿದರು.

`ಅಲೆಮಾರಿ' ಚಿತ್ರದ ಬಳಿಕ ತಮ್ಮ ಜವಾಬ್ದಾರಿ ಹೆಚ್ಚಿದೆ. ಈ ಚಿತ್ರದ ಮೂಲಕ ಅದನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸವಿದೆ. ಅನೂಪ್ ಈಗ ಖಾಲಿ ಬಿಳಿಹಾಳೆ ಇದ್ದಂತೆ. ಆತನ ಪ್ರತಿಭೆ ಬಳಸಿಕೊಂಡು ಅದನ್ನು ಸುಂದರ ಬರಹವನ್ನಾಗಿ ಪರಿವರ್ತಿಸುವ ಹೊಣೆ ತಮ್ಮ ಮೇಲಿದೆ. ಆತನ ಸಿನಿಮಾ ಭವಿಷ್ಯಕ್ಕೆ ಈ ಚಿತ್ರ ಅಡಿಪಾಯ ಎನ್ನುವುದನ್ನು ಮರೆತಿಲ್ಲ ಎಂಬುದು ನಿರ್ದೇಶಕ ಸಂತು ಮಾತು.

ಚಿತ್ರದಲ್ಲಿ ಐದು ಹಾಡುಗಳಿದ್ದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಈಗಾಗಲೇ ಮೂರು ಹಾಡುಗಳಿಗೆ ಮಟ್ಟು ಹಾಕಿದ್ದಾರೆ. ನಿರ್ದೇಶಕ ಸಂತು ಸ್ವತಃ ಸಾಹಿತ್ಯವನ್ನೂ ರಚಿಸುವುದರಿಂದ ಸಂಗೀತ ಹೆಣೆಯುವ ಕಾಯಕ ಸುಲಭ ಎಂದರು ಅರ್ಜುನ್ ಜನ್ಯ.
ಎರಡು ಧಾರಾವಾಹಿಗಳಲ್ಲಿ ನಟಿಸಿರುವ ಅದಿತಿ `ಡವ್' ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಚಿತ್ರದ ಮತ್ತೊಂದು ನಾಯಕ-ನಾಯಕಿ ಜೋಡಿ ರಾಕೇಶ್ ಅಡಿಗ ಮತ್ತು ಪ್ರಜ್ಞಾ.

ಉಪಮುಖ್ಯಮಂತ್ರಿ ಆರ್. ಅಶೋಕ್, ನಿರ್ಮಾಪಕರಾದ ಆನಂದ್ ಅಪ್ಪುಗೋಳ್, ಸಾ.ರಾ. ಗೋವಿಂದು, ಗೋವಿಂದರಾಜು, ನಟರಾದ ರವಿಚಂದ್ರನ್, ಜಗ್ಗೇಶ್, ಶಿವರಾಜ್‌ಕುಮಾರ್, ಸಾಧು ಕೋಕಿಲ, ನಟಿ ಜಯಂತಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT