ADVERTISEMENT

ತಮಿಳಿನ ಗಣೇಶ್ ಕನ್ನಡಕ್ಕೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2012, 19:30 IST
Last Updated 4 ಜುಲೈ 2012, 19:30 IST

ಕನ್ನಡ ಚಿತ್ರವೊಂದಕ್ಕಾಗಿ ಕಾಲಿವುಡ್ ನಟ ಗಣೇಶ್ ವೆಂಕಟರಾಮನ್ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿದ್ದಾರೆ. ಅಂದಹಾಗೆ, ಇವರನ್ನು ಕನ್ನಡಕ್ಕೆ ಕರೆತಂದಿರುವುದು `ಚಂದ್ರ~ ಚಿತ್ರದ ನಿರ್ದೇಶಕಿ ರೂಪಾ ಅಯ್ಯರ್. ಗಣೇಶ್ ಈ ಚಿತ್ರದಲ್ಲಿ ಶ್ರೇಯಾ ಶರಣ್ ಅವರಿಗೆ ಎರಡನೇ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರಂತೆ. 

  ಕಾಲಿವುಡ್‌ನಿಂದ ಸ್ಯಾಂಡಲ್‌ವುಡ್‌ಗೆ ಕಾಲಿಡುತ್ತಿರುವ ಗಣೇಶ್ ಕಟ್ಟುಮಸ್ತು ಹುಡುಗ. ತಮಿಳು ಚಿತ್ರರಂಗದ ಸ್ಫುರದ್ರೂಪಿ ಹೀರೋಗಳಲ್ಲಿ ಒಬ್ಬರು. ಫೈಟ್ ಮತ್ತು ಡ್ಯಾನ್ಸ್ ಮಾಡುವುದರಲ್ಲಿ ಪಂಟರ್. ಇಂಥ ಹುಡುಗ  ಕನ್ನಡ ಪ್ರೇಕ್ಷಕರನ್ನು ಮೋಡಿ ಮಾಡಲು ಬರುತ್ತಿದ್ದಾರೆ. 

  ಅಂದುಕೊಂಡಂತೆ ಆಗಿದ್ದರೆ ಗಣೇಶ್ ಕನ್ನಡ ಚಿತ್ರದಲ್ಲಿ ನಟಿಸಿ ಹಲವು ವರ್ಷಗಳಾಗಿರುತ್ತಿತ್ತು. ತಮಿಳಿನಲ್ಲಿ ತೆರೆ ಕಂಡು, ಯಶಸ್ಸು ಪಡೆದ `ಅಭಿಯುಂ ನಾನುಂ~ ಚಿತ್ರವನ್ನು ಕನ್ನಡಕ್ಕೆ (ನಾನು ನನ್ನ ಕನಸು) ರಿಮೇಕ್ ಮಾಡುವಾಗ, ಆ ಚಿತ್ರದಲ್ಲಿ ನಟಿಸುವಂತೆ ಗಣೇಶ್‌ಗೆ ಪ್ರಕಾಶ್ ರಾಜ್ ಆಫರ್ ಇಟ್ಟಿದ್ದರು. ಆದರೆ, ಗಣೇಶ್‌ಗೆ ಆ ಸಂದರ್ಭದಲ್ಲಿ ಚಿತ್ರಕ್ಕೆ ಡೇಟ್ಸ್ ಹೊಂದಾಣಿಕೆ ಮಾಡುವುದು ಕಷ್ಟವಾಗಿದ್ದರಿಂದ ಅವರು ಹಿಂದೆ ಸರಿದಿದ್ದರು. 

  ಅಂದಹಾಗೆ, ರೂಪಾ ಅಯ್ಯರ್ `ಚಂದ್ರ~ ಚಿತ್ರದ ಈ ಪಾತ್ರಕ್ಕೆ ಮೊದಲಿಗೆ ಶ್ರೀಶಾಂತ್ ಅವರನ್ನು ಕರೆತರಬೇಕು ಎಂದು ಬಯಸಿದ್ದರಂತೆ. ಈ ಕುರಿತು ಮಾತುಕತೆ ಕೂಡ ನಡೆದಿತ್ತು. ಆದರೆ, ಶ್ರೀಶಾಂತ್ ಅವಕಾಶವನ್ನು ತಿರಸ್ಕರಿಸಿದ್ದರಿಂದ ಆ ಜಾಗಕ್ಕೆ ಗಣೇಶ್ ಅವರನ್ನು ಕರೆತರಲಾಗಿದೆ. `ಚಂದ್ರ~ ಚಿತ್ರ ಕನ್ನಡ ಮತ್ತು ತಮಿಳು ಎರಡರಲ್ಲೂ ತೆರೆಕಾಣಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.